ಪ್ರಜಾಸ್ತ್ರ ಸುದ್ದಿ
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಡಿಯು ಶಾಸಕರ ಸಭೆಯ ಬಳಿಕ ರಾಜಭವನಕ್ಕೆ ತೆರಳಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಹಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಕೇಂದ್ರ ಸಚಿವ ನಿತ್ಯಾನಂದ ರಾಯ್ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಇಂಡಿಯಾ ಮೈತ್ರಿ ಕೂಟದಿಂದ ನಿತೀಶ್ ಕುಮಾರ್ ಹೊರ ಬಂದು ಮತ್ತೊಮ್ಮೆ ಎನ್ ಡಿಎ ಜೊತೆಗೆ ಕೈ ಜೋಡಿಸುವ ಸಾಧ್ಯತೆಯಿದೆ.
ಶನಿವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಲವು ಬಾರಿ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಸಿಕ್ಕಿಲ್ಲ. ಬಿಹಾರ 243 ಶಾಸಕರನ್ನು ಹೊಂದಿದೆ. ಆರ್ ಜೆಡಿ 79, ಬಿಜೆಪಿ 78, ಜೆಡಿಯು 45, ಕಾಂಗ್ರೆಸ್ 19, ಸಿಪಿಎಂ(ಎಂ-ಎಲ್) 12, ಸಿಪಿಐ ಹಾಗೂ ಸಿಪಿಎಂ ತಲಾ ಇಬ್ಬರು ಶಾಸಕರಿದ್ದಾರೆ. ಹಿಂದೂಸ್ಥಾನ ಆವಾಮ್ ಮೋರ್ಚಾ 4, ಎಐಎಂಐಂ 2 ಹಾಗೂ ಒಬ್ಬರು ಪಕ್ಷೇತರ ಶಾಸಕರಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಇಂಡಿಯಾ ಮೈತ್ರಿ ಕೂಟದಿಂದ ಟಿಎಂಸಿ ಹಿಂದಕ್ಕೆ ಸರಿಯುತ್ತಿದೆ ಎಂದು ಘೋಷಿಸಿದ್ದರು. ಈಗ ಜೆಡಿಯು ಸರದಿಯಾಗಿದೆ. ಜನವರಿ 30ರಂದು ಪೂರ್ಣಿಯಾದಲ್ಲಿ ನಡೆಯಲಿರುವ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ನಿತೀಶ್ ಕುಮಾರಗೆ ಕಾಂಗ್ರೆಸ್ ಆಹ್ವಾನ ನೀಡಿದೆ. ಆದರೆ, ಅವರು ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ.