ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ದೇಶದ ಪ್ರಥಮ ಪ್ರಜೆ ಎಂದರೆ ಅದು ರಾಷ್ಟ್ರಪತಿಗಳು. ಭಾರತದ ಕಟ್ಟಕಡೆಯ ಹಾಗೂ ಅತಿ ಗೌರವದ ಹುದ್ದೆ ಅಂದರೆ ರಾಷ್ಟ್ರಪತಿ ಹುದ್ದೆ. ಹೀಗಾಗಿ ಆ ಸ್ಥಾನದಲ್ಲಿ ಯಾರೆ ಇದ್ದರೂ ಜಾತಿ, ಧರ್ಮ, ರೂಪ, ಬಣ್ಣದಿಂದ ಅವರನ್ನು ಅವಮಾನಿಸಲಾಗದು. ಮನುಷ್ಯತ್ವ ಇರುವವರು ಸಾಮಾನ್ಯ ಜನರನ್ನು ಸಹ ಈ ಕಾರಣಕ್ಕೆ ಅಗೌರವಿಸಲಾರರು. ಆದರೆ, ಒಂದು ಪತ್ರಿಕಾ ಸಂಸ್ಥೆಯ ಮುಖ್ಯಸ್ಥರೊಬ್ಬರ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಪತ್ರಕರ್ತ ವಿಶ್ವೇಶ್ವರ್ ಭಟ್ ಅವರ ಅಂಕಣವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಣ್ಣದ ಬಗ್ಗೆ ಅತಿ ಕೀಳಾಗಿ ಮಾತನಾಡಿದ್ದು, ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದು, ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಗಿದೆ. ಪತ್ರಿಕೆಯಲ್ಲಿ ಏನು ಬೇಕಾದರೂ ಬರೆಯಬಹುದು ಅಂದುಕೊಂಡಿರುವ ಇಂತವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಲಾಗುತ್ತಿದೆ.