ಪ್ರಜಾಸ್ತ್ರ ಸುದ್ದಿ
ವಿಜಯಪುರ:ರೋಗಿಗಳಿಗೆ ಸರಿಯಾದ ಟೈಂಗೆ ಆಸ್ಪತ್ರೆ, ಬೆಡ್, ಆಂಬ್ಯುಲೆನ್ಸ್ ಸಿಗದೆ ಪರದಾಡ್ತಿರುವ, ಸಾವನ್ನಪ್ಪುತ್ತಿರುವ ಘಟನೆ ರಾಜಧಾನಿಯಲ್ಲಿ ನಡೆಯುತ್ತಿದೆ. ಇದೇ ರೀತಿಯ ಪರಿಸ್ಥಿತಿ ಈಗ ಗುಮ್ಮಟನಗರಿಯಲ್ಲೂ ನಿರ್ಮಾಣವಾಗಿದೆ. ಹೀಗಾಗಿ ಜಿಲ್ಲಾಸ್ಪತ್ರೆಯಲ್ಲಿ ತಡರಾತ್ರಿ ರೋಗಿಯೊಬ್ಬ ಮೃತಪಟ್ಟಿದ್ದಾನೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಿಂದಗಿ ತಾಲೂಕಿನ ಮಲಘಾಣ ಗ್ರಾಮದ 54 ವರ್ಷದ ವ್ಯಕ್ತಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರಕ್ಕೆ ದಾಖಲಿಸಲು ಹೇಳಿದ್ದಾರೆ. ಹೀಗಾಗಿ ರೋಗಿ ಸಂಬಂಧಿಕರು ಅಲ್ ಅಮೀನ್ ಆಸ್ಪತ್ರೆ, ಯಶೋಧರಾ ಆಸ್ಪತ್ರೆ, ಬಿಎಲ್ ಡಿಇ ಹಾಗೂ ವೇದಾಂತ ಆಸ್ಪತ್ರೆ ಸುತ್ತಿದ್ರೂ ಬೆಡ್ ಖಾಲಿ ಇಲ್ಲವೆಂದು ಹೇಳಿದ್ದಾರೆ.
ಬಳಿಕ ಜಿಲ್ಲಾಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿಯೂ ಬೆಡ್ ಖಾಲಿಯಿಲ್ಲ ಅನ್ನೋ ಉತ್ತರ ಬಂದಿದೆ. ಹೀಗಾಗಿ ಡಿಸಿ ಕಚೇರಿಗೆ ಹೋಗಿದ್ದಾರೆ. ಅವರು ಜಿಲ್ಲಾಸ್ಪತ್ರೆಗೆ ಫೋನ್ ಮಾಡಿ ರೋಗಿಯನ್ನ ದಾಖಲಿಸಿಕೊಳ್ಳಲು ಹೇಳಿದ್ರು. ಅದರಂತೆ ದಾಖಲಾಗಿದ್ದ ರೋಗಿ, ಗುರುವಾರ ತಡರಾತ್ರಿ ಸಾವನ್ನಪ್ಪಿದ್ದಾನೆ.
ಜಿಲ್ಲಾಸ್ಪತ್ರೆಯಲ್ಲಿ 85 ಆಕ್ಸಿಜೆನ್ ಬೆಡ್ ಗಳಿವೆ. ಈಗಾಗ್ಲೇ ಹಲವು ಜನರಿಗೆ ಚಿಕಿತ್ಸೆ ನೀಡಲಾಗ್ತಿದೆ. ಎಲ್ಲ ರೋಗವನ್ನ ಕರೋನಾವೆಂದು ತಿಳಿದುಕೊಳ್ಳೋದು ಬೇಡ. ಮೃತಪಟ್ಟ ರೋಗಿಗೆ ಕರೋನಾ ಸೋಂಕಿನ ಲಕ್ಷಣಗಳು ಇರಲಿಲ್ಲ. ಕುಟುಂಬಸ್ಥರಿಗೆ ನಂಬಿಕೆ ಬಂದಿಲ್ಲ. ಹೀಗಾಗಿ ದಾಖಲಿಸಿಕೊಳ್ಳಿ ಎಂದಿದ್ದಾರೆ. ಆಗ ಸಿಬ್ಬಂದಿ ಇಲ್ಲವೆಂದು ಹೇಳಿದ್ಮೇಲೆ ಬೇರೆ ಕಡೆ ಹೋಗಿದ್ರು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.
ಇನ್ನು ಖಾಸಗಿ ಹಾಗೂ ಸರ್ಕಾರಿ ವೈದ್ಯರಿಗೆ ಡಿಸಿ ಖಡಕ್ ಎಚ್ಚರಿಕೆ ನೀಡಿದ್ದು, ಚಿಕಿತ್ಸೆ ನೀಡುವಾಗ ಮಾನವೀಯತೆ ಮರೆಯಬಾರದು. ಬೆಡ್ ಖಾಲಿ ಇಲ್ಲವೆಂದು ಸುಳ್ಳು ಹೇಳುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.