ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ದೇಶಕ ಆರ್.ಚಂದ್ರು ಜೋಡಿಯ ಕಬ್ಜ ಮೂವಿ ಭಾರೀ ಕುತೂಹಲ ಮೂಡಿಸಿದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೊರಟಿರುವ ಕಬ್ಜ ಟೀಂ, 7 ಭಾಷೆಯಲ್ಲಿ ಚಿತ್ರ ರಿಲೀಸ್ ಗೆ ರೆಡಿಯಾಗ್ತಿದೆ. ಪೋಸ್ಟರ್, ಫೋಟೋಶೌಟ್ ಮುಗಿಸಿ ಶೂಟಿಂಗ್ ಗೆ ರೆಡಿಯಾಗುವ ಟೈಂನಲ್ಲಿ ಲಾಕ್ ಡೌನ್ ಆಯ್ತು.
ಇದೀಗ ಲಾಕ್ ಡೌನ್ ಸಡಿಲಿಕೆಯಾಗಿದ್ದು, ಶೂಟಿಂಗ್ ಗೆ ಅನುಮತಿ ನೀಡಲಾಗಿದೆ. ಜುಲೈನಲ್ಲಿ ಚಿತ್ರೀಕರಣಕ್ಕೆ ಸಿದ್ಧತೆ ನಡೆದಿದೆ. ಆದ್ರೆ, ಸರ್ಕಾರದ ನಿಯಮಗಳು ಕಬ್ಜ ಚಿತ್ರದ ಶೂಟಿಂಗ್ ಗೆ ತೊಡಕು ಆಗಿವೆ. ನೂರಾರು ಕಲಾವಿದರನ್ನ ಬಳಸಿಕೊಂಡು ಶೂಟಿಂಗ್ ನಡೆಸಬೇಕು. ಆದ್ರೆ, ಅಷ್ಟೊಂದು ಕಲಾವಿದರನ್ನ ಬಳಸುವಂತಿಲ್ಲ. ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಂಡು ಭರ್ಜರಿ ಸೆಟ್ ನಲ್ಲಿ ಶೂಟಿಂಗ್ ಮಾಡುವುದು ಹೇಗೆ ಅಂತಿದೆ ಚಿತ್ರತಂಡ.
ಈಗ ಬೆಂಗಳೂರಿನಲ್ಲಿ ಕರೋನಾ ಅಬ್ಬರ ಜೋರಾಗಿದೆ. ವಿದೇಶ ಪ್ರಯಾಣ ಸಾಧ್ಯವಿಲ್ಲ. ರಾಜ್ಯದ ಇತರೆ ಕಡೆ ಶೂಟಿಂಗ್ ಮಾಡುವುದು ಕಷ್ಟ. ಹೀಗಾಗಿ ಕಬ್ಜ ಚಿತ್ರದ ಶೂಟಿಂಗ್ ನಡೆಸೋದು ಹೇಗಪ್ಪಾ ಅನ್ನೋ ಚಿಂತೆ ಮೂಡಿದ್ದು, ನಿರ್ದೇಶಕ ಆರ್.ಚಂದ್ರು, ನಟ ಉಪೇಂದ್ರ ಸೇರಿದಂತೆ ಚಿತ್ರತಂಡ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದೆಯಂತೆ.
ಕರೋನಾ ಲಾಕ್ ಡೌನ್ ನಿಂದಾಗಿ ಸಿನಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಮೂರು ತಿಂಗಳಿನಿಂದ ಶೂಟಿಂಗ್ ಇಲ್ಲ. ಇದೀಗ ಅವಕಾಶ ನೀಡಿದ್ರೂ ಷರತ್ತುಗಳಡಿಯಲ್ಲಿ ಚಿತ್ರೀಕರಣ ಕಷ್ಟವಾದ ಕಾರಣ, ಸಿನಿಮಾ ಕೆಲಸಗಳು ನಡೆದಿಲ್ಲ. ಒಟ್ಟಿನಲ್ಲಿ ಕರೋನಾ ಸಿನಿ ಕಾರ್ಮಿಕರ ಬದುಕು ಕಸಿದುಕೊಂಡಿದೆ.