ಕಲಬುರಗಿ: ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಕೊಲೆಯೊಂದು ನಡೆದಿದ್ದು, ಆರೋಪಿಯನ್ನ ಪೊಲೀಸ್ರು ಬಂಧಿಸಿದ್ದಾರೆ. 45 ವರ್ಷದ ಶ್ರೀಶೈಲ ಬಂಧಿತ ಆರೋಪಿ.
ಕೂಲಿ ಕೆಲಸ ಮಾಡಿಕೊಂಡಿದ್ದ ಶ್ರೀಶೈಲ ಹಾಗೂ ಪತ್ನಿ ಸಂಗೀತಾ ಸಕ್ಕರಗಿಯನ್ನ ಶನಿವಾರ ರಾತ್ರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನ ಮೂರು ದಿನಗಳ ಕಾಲ ಮನೆಯಲ್ಲಿಯೇ ಬಿಚ್ಚಿಟ್ಟಿದ್ದಾನೆ. ಶವ ಕೊಳೆತ ವಾಸನೆ ಬಂದ್ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಪಾಪಿ ಪತಿಯನ್ನ ಪೊಲೀಸ್ರು ಬಂಧಿಸಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ಶ್ರೀಶೈಲ ಹಾಗೂ ಸಂಗೀತಾ ಮದುವೆ ಮಾಡಿಕೊಂಡಿದ್ರು. ಈ ದಂಪತಿಗೆ ಮಕ್ಕಳು ಆಗಿರ್ಲಿಲ್ಲ. ಹೀಗಿರುವಾಗ ಪತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ಗೊತ್ತಿದ್ರೂ ಪತ್ನಿ ಸುಮ್ಮನಿದ್ದಳಂತೆ. ಆದ್ರೆ, ಗಂಡ ನಿತ್ಯ ಕುಡಿದು ಬಂದು ಗಲಾಟೆ ಮಾಡಿಕೊಂಡು ಬರ್ತಿದ್ದ. ಅದೆ ರೀತಿ ಶನಿವಾರ ಕುಡಿದು ಬಂದ ಶ್ರೀಶೈಲ, ಕತ್ತು ಹಿಸುಕಿ ಪತ್ನಿಯನ್ನ ಕೊಲೆ ಮಾಡಿ, ಮನೆಯಲ್ಲಿಯೇ ಬಚ್ಚಿಟ್ಟಿದ್ದಾನೆ.
ಮೂರು ದಿನಗಳಾದ್ರೂ ಸಂಗೀತಾ ಕಾಣಿಸಿಕೊಂಡಿಲ್ಲ. ಅಕ್ಕಪಕ್ಕದ ಮನೆಯವರು ಕೇಳಿದ್ದಾರೆ. ಆದ್ರೂ ಏನೂ ಹೇಳಿಲ್ಲ. ಮನೆಯಿಂದ ಕೆಟ್ಟ ವಾಸನೆ ಬರ್ತಿರುವುದ್ರಿಂದ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ರು ಸ್ಥಳ ಪರಿಶೀಲನೆ ನಡೆಸಿದಾಗ ಶವ ಪತ್ತೆಯಾಗಿದೆ. ಇಷ್ಟೊಂದು ಅಮಾನವೀಯವಾಗಿ ನಡೆದುಕೊಂಡ ಪಾಪಿ ಪತಿ ಇದೀಗ ಕಂಬಿ ಹಿಂದೆ ಸೇರಿದ್ದಾನೆ.