ಪ್ರಜಾಸ್ತ್ರ ವಿಶೇಷ ವರದಿ
ಹುಬ್ಬಳ್ಳಿ: ಈ ಬದುಕು ಯಾವಾಗ ಹೇಗೆ ಬದಲಾಗುತ್ತೆ ಅನ್ನೋದು ಗೊತ್ತಾಗುವುದಿಲ್ಲ. ಕೆಲವೊಮ್ಮೆ ಖುಷಿಯ ದಿನಗಳನ್ನ ನೀಡಿದ್ರೆ, ಮತ್ತೆ ಕೆಲವೊಮ್ಮೆ ಕಡುಕಷ್ಟಕ್ಕೆ ದೂಡಿಬಿಡುತ್ತೆ. ಹೀಗೆ ಒಳ್ಳೆಯ ಹೀರೋ ಲುಕ್ ಕೊಟ್ಟಿರುವ ಯುವಕನ ಹೆಸರು ವಿನಾಯಕ ಚವ್ಹಾಣ. ಹುಬ್ಬಳ್ಳಿಯ ಕಲ್ಮೇಶ್ವರ ನಗರದ ನಿವಾಸಿ. ಸುಂದರ ಕನಸುಗಳನ್ನ ಕಟ್ಟಿಕೊಂಡಿದ್ದ ಹುಡ್ಗ ಇದೀಗ ಆಸ್ಪತ್ರೆ ಬೆಡ್ ಮೇಲೆ ತನ್ನನ್ನೇ ತಾನು ಮರೆತು ಮಲಗಿದ್ದಾನೆ.
ನಗರದ ಐಬಿಎಂಆರ್ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡ್ತಿದ್ದ ವಿನಾಯಕಗೆ, ಕಳೆದ ವರ್ಷ ಏಕಾಕಿ ಮೂರ್ಚೆರೋಗ ಕಾಣಿಸಿಕೊಂಡಿದೆ. ಅಂದಿನಿಂದ ಇಂದಿನ ತನಕ ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡಿದ್ದಾನೆ. ಸಣ್ಣಮಕ್ಕಳ ಹಾಗೆ ವರ್ತನೆ ಮಾಡ್ತಾನೆ ಎಂದು ಹೆತ್ತವಳು ಹೇಳುವಾಗ ಕಣ್ಣೀರು ಬರುತ್ತೆ.
ಕಳೆದ ವರ್ಷ ವಿನಾಯಕ ತನ್ನ ಕುಟುಂಬದವರೊಂದಿಗೆ ಸರ್ಪ ದೋಷ ನಿವಾರಣೆಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ್ದಾಗ ವಿಪರೀತ ಜ್ವರದಿಂದ ದೇವಸ್ಥಾನದ ಆವರಣದಲ್ಲಿ ಕುಸಿದು ಬಿದ್ದಿದ್ದಾನೆ. ಅಲ್ಲಿ ಯಾವುದೇ ಅಸ್ಪತ್ರೆಗಳು ಇಲ್ಲದ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹುಬಳ್ಳಿಯ ಎಸ್ ಡಿಎಂಗೆ ದಾಖಲಿಸಿ, 6 ಲಕ್ಷ ಖರ್ಚು ಮಾಡಿದ್ರೂ ಏನು ಉಪಯೋಗವಾಗಿಲ್ಲ. ನನ್ನ ಮಗ ಮೊದಲಿನಂತೆ ಆದ್ರೆ ಸಾಕು ಎಂದು ತಾಯಿ ಕಣ್ಣೀರು ಹಾಕ್ತಿದ್ದಾಳೆ. ಆಕೆಯ ನೋವಿನ ನುಡಿಗಳು ಇಲ್ಲಿವೆ ನೋಡಿ.
ಪದವಿ ಮುಗಿಸಿ ಕೆಲಸಕ್ಕೆ ಸೇರಿಬೇಕು ಅನ್ನೋ ಆಸೆ ಹೊತ್ತುಕೊಂಡಿದ್ದ ಹುಡ್ಗ ಏಕಾಏಕಿ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಇದೀಗ ಆತನ ಚಿಕಿತ್ಸೆಗೆ ಇನ್ನು ಹೆಚ್ಚಿನ ಹಣದ ಅವಶ್ಯಕತೆಯಿದೆ. ಹೀಗಾಗಿ ದಾನಿಗಳು ಸಹಾಯ ಮಾಡಬೇಕು ಎಂದು ಹೆತ್ತವಳು ಅಂಗಲಾಚಿದ್ದಾಳೆ. ಸರ್ಕಾರವಾದ್ರೂ ಇವರ ನೆರವಿಗೆ ಬಂದು ವಿನಾಯಕನ ಜೀವನ ಮೊದಲಿನಂತೆ ಆಗುವಲ್ಲಿ ಸಹಕರಿಸಬೇಕೆಂದು ಮನವಿ ಮಾಡಿಕೊಳ್ಳಲಾಗ್ತಿದೆ.