ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಬುಧವಾರ ಸ್ಥಳ ಮಹಜರ ನಡೆಸಿದರು. ಸಿಐಡಿ ಅಧಿಕಾರಿಗಳು ಆರೋಪಿ ಫಯಾಜ್ ನನ್ನು ಧಾರವಾಡ ಕೇಂದ್ರ ಕಾರಾಗೃಹದಿಂದ ಕರೆದುಕೊಂಡು ಬಿವಿಬಿ ಕಾಲೇಜು ಆವರಣಕ್ಕೆ ಬಂದು ಮಹಜರ ನಡೆಸಿದರು.
ಸಿಐಡಿ ಅಧಿಕಾರಿಗಳು ಎರಡು ತಂಡಗಳಾಗಿ ತನಿಖೆ ನಡೆಸಿದೆ. ಒಂದು ತಂಡ ಕೊಲೆ ನಡೆದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿತು. ಮತ್ತೊಂದು ತಂಡ ಫಯಾಜ್ ಊರು ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮಕ್ಕೆ ತೆರಳಿ ಮಾಹಿತಿ ಪಡೆಯಿತು.
ಕೊಲೆ ಮಾಡುವ ಉದ್ದೇಶದಿಂದ ಧಾರವಾಡದಿಂದ ಚಾಕು ಖರೀದಿಸಿ ಬ್ಯಾಗ್ ನಲ್ಲಿಟ್ಟುಕೊಂಡಿದ್ದ. ಏಪ್ರಿಲ್ 18ರಂದು ಕಾಲೇಜಿಗೆ ಬಂದಿದ್ದ ಆತ, ಬೈಕ್ ಹ್ಯಾಂಡಲ್ ಲಾಕ್ ಮಾಡದೆ ಬಿಟ್ಟಿದ್ದ. ಕೊಲೆ ಮಾಡಿದ ನಂತರ ಎಸ್ಕೇಪ್ ಆಗಲು ನೋಡಿದ್ದ. ಅದಾಗದೆ ಹೋದಾಗ ಮುಖ್ಯದ್ವಾರದಿಂದ ಹೋಗಲು ನೋಡಿದಾಗ ವಿದ್ಯಾರ್ಥಿಗಳು ಹಾಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ವಿಚಾರಣೆ ವೇಳೆ ಹೇಳಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.
ಫಯಾಜನನ್ನು ಕಾಲೇಜು ಆವರಣಕ್ಕೆ ಕರೆದುಕೊಂಡು ಬಂದಾಗ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅವನಿಗೆ ಶಿಕ್ಷೆಯಾಗಬೇಕು. ಸಿಐಡಿ ತನಿಖೆಗೆ ಕೊಡಿ ಇಲ್ಲದಿದ್ದರೆ ನಮಗೆ ಒಪ್ಪಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಅವರನ್ನು ತಡೆದರು.