ರಾಜ್ಯದಲ್ಲಿ ಉಪ ಚುನಾವಣೆ ಮತದಾನದ ಕಾವು ಜೋರಾಗಿದೆ. ಕೆಲವು ಕಡೆ ಶಾಂತಿಯಿಂದ ನಡೆಯುತ್ತಿದೆ. ಇನ್ನು ಕೆಲವು ಕಡೆ ಅಶಾಂತಿ ನಿರ್ಮಾಣವಾಗಿದೆ. ಕೆಲವು ಕಡೆ ಕಾರ್ಯಕರ್ತರ ನಡುವೆ ಗಲಾಟೆ ನಡೆದಿವೆ. ಕೆಲವು ಕಡೆ ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಘಟನೆಗಳು ನಡೆದಿವೆ.
ಹೊಸಕೋಟೆ ಭುವನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 49ರಲ್ಲಿ ಮತಯಂತ್ರ ಕೈಕೊಟ್ಟು ಕೆಲಕೆಲ ಮತದಾನ ನಡೆಯಲಿಲ್ಲ. ಈ ವೇಳೆ ಮತದಾರರು ಚುನಾವಣೆ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಗೋಕಾಕ ಮತ ಕ್ಷೇತ್ರದ ಮತಗಟ್ಟೆ ಸಂಖ್ಯೆ 231ಕ್ಕೆ ಅಧಿಕಾರಿ ಮದ್ಯ ಸೇವಿಸಿ ಬಂದ ಘಟನೆ ನಡೆದಿದೆ. ಇದ್ರಿಂದಾಗಿ ಶಿಕ್ಷಕ ಪ್ರಕಾಶ ನಾಸಿಪುಡಿ ಅಮಾನತು ಆಗಿದ್ದಾರೆ.
ವಿಜಯನಗರದ ಹೊಸಪೇಟೆಯ ಮುದ್ಲಾಪುರ ಗ್ರಾಮಸ್ಥರು ಮತದಾನ ಬಹಿಷ್ಕರ ಮಾಡಿದ್ದಾರೆ. ಈ ವೇಳೆ ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್ ಗ್ರಾಮಕ್ಕೆ ತೆರಳಿ ಮನವೊಲಿಸುವ ಕೆಲಸ ಮಾಡಿದ್ರು. ವೋಟಿಂಗ್ ನಡೆಯುತ್ತಿರುವ ಟೈಂನಲ್ಲಿ ಮತದಾನಕ್ಕೆ ಮನವೊಲಿಕೆ ನಡೆದಿರುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಅಂತಾ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಇದೆ ವಿಜಯನಗರದ ಕ್ಷೇತ್ರದಲ್ಲಿ ಮತದಾರನೊಬ್ಬ ಕಾಂಗ್ರೆಸ್ ಗೆ ವೋಟ್ ಮಾಡಿರುವುದನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ ಘೋರ್ಪಡೆಗೆ ಮತ ಹಾಕಿರುವ ಫೋಟೋ ವೈರಲ್ ಆಗಿದ್ದು, ಯಾವ ಮತಗಟ್ಟೆಯಲ್ಲಿ ನಡೆದಿದೆ ಅನ್ನೋದು ಇನ್ನು ಕನ್ಫರ್ಮ್ ಆಗಿಲ್ಲ.
ಇನ್ನು ಹುಣಸೂರು ಮತ ಕ್ಷೇತ್ರದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ದೊಡ್ಡ ಗಲಾಟೆ ನಡೆದಿದೆ. ಇಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಜೋರಾಗಿದೆ. ಬಿಜೆಪಿಯಿಂದ ಹೆಚ್.ವಿಶ್ವನಾಥ, ಕಾಂಗ್ರೆಸ್ ನಿಂದ ಹೆಚ್.ಸಿ ಮಂಜುನಾಥ ಹಾಗೂ ಜೆಡಿಎಸ್ ನಿಂದ ಸೋಮಶೇಖರ ಕಣದಲ್ಲಿದ್ದಾರೆ.