ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗ ಸಂಘದ ಬೆಂಗಳೂರು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಶನಿವಾರ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಕಳೆದ 15 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿರುವ, ಸಾಕ್ಷ್ಯಚಿತ್ರ ನಿರ್ದೇಶಕರಾಗಿರುವ ಚಂದ್ರಕಾಂತ ಸೊನ್ನದ ಅವರನ್ನು ಅಧ್ಯಕ್ಷರಾಗಿ, ಪ್ರಜಾವಾಣಿಯ ಹಿರಿಯ ಪತ್ರಕರ್ತರಾದ ಸುಶೀಲಾ ಡೋಣೂರ ಅವರನ್ನು ಉಪಾಧ್ಯಕ್ಷರನ್ನಾಗಿ, ಈ ಹಿಂದೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿ, ಪ್ರಸ್ತುತ ಪಿಆರ್ ಕಂಪನಿಯಲ್ಲಿರುವ ಪ್ರವೀಣ ಶಿರಿಯಣ್ಣವರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದಾರೆ.
ಕನ್ನಡ ಪ್ರಭ ಡಿಜಿಟಲ್ ವಿಭಾಗದ ಸಂಪಾದಕರಾದ ಲಿಂಗರಾಜ ಬಡಿಗೇರ ಉಪಾಧ್ಯಕ್ಷರಾಗಿ, ಜಿ ನ್ಯೂಸ್ ವಾಹಿನಿಯ ಡಿಜಿಟಲ್ ವಿಭಾಗದ ಸಂಪಾದಕರಾದ ರವಿ.ಎಸ್ ಕಾರ್ಯದರ್ಶಿಯಾಗಿ, ಪ್ರಜಾವಾಣಿಯ ಮಂಜುನಾಥ ಭದ್ರಶೆಟ್ಟಿ ಸಹ ಕಾರ್ಯದರ್ಶಿಯಾಗಿ, ನ್ಯೂಸ್ 18 ವಾಹಿನಿಯ ಹಿರಿಯ ರಾಜಕೀಯ ವರದಿಗಾರ ಅನಿಲ ಬಾಸೂರ ಖಜಾಂಚಿಯಾಗಿ, ಕನ್ನಡ ಪ್ರಭದ ಮುತ್ತುರಾಜ ಸುಳ್ಳದ, ವಿನಾಯಕ ಲಿಮಯೆ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಈ ವೇಳೆ ಸಲಹಾ ಸಮಿತಿ ಸದಸ್ಯರನ್ನು ಸಹ ಆಯ್ಕೆ ಮಾಡಲಾಗಿದೆ.
ಕವಿಪವಿ ಸಂಘದ ಹಿನ್ನಲೆ:
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಅಧ್ಯಯನ ಮಾಡಿ ಬೆಂಗಳೂರಿನಲ್ಲಿ ನೆಲೆ ನಿಂತಿರುವವರು ಕೂಡಿಕೊಂಡು 1991ರಲ್ಲಿ ಸ್ಥಾಪಿಸಿದ ಸಂಘವಾಗಿದೆ. ಅಂದಿನ ಸಿಎಂ ವೀರಪ್ಪ ಮೊಯ್ಲಿ ಅವರು ಸಂಘವನ್ನು ಉದ್ಘಾಟಿಸಿದ್ದಾರೆ. ಕವಿಪವಿಯ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸದಸ್ಯರ ಹಾಗೂ ಅವರ ಕುಟುಂಬದವರೊಂದಿಗೆ ಕೂಡಿಕೊಂಡು ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ.