ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಳೆದ ಮೂರು ದಿನಗಳು ಸಾರಿಗೆ ನೌಕರರು ಮುಷ್ಕರ ನಡೆಸ್ತಿದ್ದಾರೆ. 6ನೆ ವೇತನ ಆಯೋಗ ಆಗಬೇಕು ಎಂದು ನೌಕರರು, ಅದು ಸಾಧ್ಯವಿಲ್ಲವೆಂದು ಸರ್ಕಾರ. ಇದೆಲ್ಲದರ ಪರಿಣಾಮ ಸರ್ವಜನಿಕರ ಮೇಲಾಗ್ತಿರುವುದು ಮಾತ್ರ ಸುಳ್ಳಲ್ಲ. ಲಕ್ಷಾಂತರ ಜನರು ಕಳೆದ ಮೂರು ದಿನಗಳಿಂದ ಕೆಲಸಕ್ಕೆ ಹೋಗಲು ಆಗದೆ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
ನಗರ ಪ್ರದೇಶದಲ್ಲಿರುವ ಜನರು ಮೆಟ್ರೋ, ಆಟೋ, ಮಿನಿ ಟ್ಯಾಕ್ಸಿ ಸೇರಿದಂತೆ ಪರ್ಯಾಯ ವಾಹನಗಳನ್ನ ಹತ್ತಿ ಕೆಲಸಕ್ಕೆ ಹೋಗುತ್ತಿದ್ದಾರೆ. ಅದು ಸಹ ಡಬಲ್, ತ್ರಿಬಲ್ ದರ ನೀಡ್ತಿದ್ದು ಜೇಬಿಗೆ ಕತ್ತರಿ ಬೀಳ್ತಿದೆ. ಗ್ರಾಮೀಣ ಭಾಗದಲ್ಲಿರುವ ಜನರು, ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಕೆಲಸಕ್ಕೆ ಹೋಗಬೇಕಾದವರು 3 ದಿನಗಳಿಂದ ಮನೆಯಲ್ಲಿಯೇ ಕುಳಿತಿದ್ದಾರೆ. ಏಪ್ರಿಲ್ ತಿಂಗಳು ಪಾಸ್ ಪಡೆದು ನಾಲ್ಕೈದು ದಿನಗಳು ಕಳೆದಿರ್ಲಿಲ್ಲ, ಸಾರಿಗೆ ಸಿಬ್ಬಂದಿ ಮುಷ್ಕರ ಶುರು ಮಾಡಿದ್ದಾರೆ.
ಈ ಮುಷ್ಕರದ ಹಿನ್ನೆಲೆಯಲ್ಲಿ ಅದೆಷ್ಟೋ ಕಾಲೇಜುಗಳಲ್ಲಿ, ಕೆಲವು ವಿಶ್ವವಿದ್ಯಾಯಗಳಲ್ಲಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇನ್ನು ಯುಗಾದಿ ಹಬ್ಬಕ್ಕೆ ಊರಿಗೆ ಹೋಗಬೇಕು ಅನ್ನೋರು ಸಹ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ನೋಡಿದ್ರೆ ರೈತ ಮುಖಂಡನಾಗಿರುವ ಕೋಡಿಹಳ್ಳಿ ಚಂದ್ರಶೇಖರ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷರಾಗುವ ಮೂಲಕ, ಮುಷ್ಕರದ ನೆಪದಲ್ಲಿ ಜನರಿಗೆ ತೊಂದರೆ ಕೊಡ್ತಿದ್ದಾರೆ ಎಂದು ಹೇಳ್ತಿದೆ. ಸರ್ಕಾರ ಸಾರಿಗೆ ಸಿಬ್ಬಂದಿಗೆ ಅನ್ಯಾಯ ಮಾಡ್ತಿದೆ ಎಂದು ಅವರು ಹೇಳ್ತಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರ ನಡುವೆ ನಿಜಕ್ಕೂ ಸಂಕಷ್ಟಕ್ಕೆ ಒಳಗಾಗಿರುವುದು ಮಾತ್ರ ದಿನದ ದುಡಿಮೆ ನಂಬಿ ಬದುಕುತ್ತಿರುವವರು ಅನ್ನೋದು ಮಾತ್ರ ಸತ್ಯ.