ಬಾಗಲಕೋಟೆ: ಮಲಪ್ರಭಾ ನದಿಯ ರಭಸಕ್ಕೆ ಕೊಚ್ಚಿಕೊಂಡು ಹೋದ ರೈತನೊಬ್ಬ ಸಾವನ್ನಪ್ಪಿದ್ದಾನೆ. ಬದಾಮಿ ತಾಲೂಕಿನ ಶಿರಬಡಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 52 ವರ್ಷದ ರಾಮಪ್ಪ ಮಲ್ಲಪ್ಪ ಹೊನ್ನನವರ ಅನ್ನೋ ರೈತ ಮೃತ ದುರ್ದೈವಿ.
ರಾಮಪ್ಪ ಪ್ರತಿದಿನ ಹೊಲಕ್ಕೆ ಹೋಗುವ ಮೊದ್ಲು ನದಿ ಪಕ್ಕದಲ್ಲಿರುವ ಗುಡಿಗೆ ಹೋಗಿ ಹೊಲಕ್ಕೆ ಹೋಗುವುದು ರೂಢಿ. ಇಂದು ಸಹ ಗುಡಿಗೆ ಹೋದ ಹೊತ್ತಿನಲ್ಲಿ, ರಭಸದಿಂದ ಹರಿಯುತ್ತಿರುವ ನೀರಿನ ಒತ್ತಡಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಬಳಿಕ ಗ್ರಾಮಸ್ಥರು, ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದಾಗ, ಶಿರಬಡಗಿ ಗ್ರಾಮದಿಂದ ಮುಂದೆ ಕಬ್ಬಿನ ಗದ್ದೆಯಲ್ಲಿ ರಾಮಪ್ಪನ ಶವ ಪತ್ತೆಯಾಗಿದೆ.
ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಮೂರು ಬಾರಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರಾಮಪ್ಪ ಸೇರಿದಂತೆ ನೆರೆ ಹಾವಳಿಗೆ 7 ಜನ ಮೃತಪಟ್ಟಿದ್ದಾರೆ.