ಮೂಲ: ತಮಿಳು, ಲೇಖಕರು: ನಂದವನಂ ಚಂದ್ರಶೇಖರನ್, ಅನುವಾದ: ಡಾ.ಮಲರ್ ವಿಳಿ ಕೆ
ಏನನ್ನೋ
ನನ್ನ ಬಳಿ ನಿರೀಕ್ಷಿಸುವಿರಿ
ಏನೆಂದು
ನನಗೂ ತಿಳಿಯುತ್ತಿಲ್ಲ
ನಿಮಗೂ ತಿಳಿಯುತ್ತಿಲ್ಲ
ಆದರೂ
ನಿರೀಕ್ಷಿಸಿ ಕೊರಗುವಿರಿ
ನನ್ನ ಬಳಿ
ಪಡೆಯಲು ಏನೂ ಇಲ್ಲ
ನಿಮ್ಮಿಂದ ತುಂಬಾ ಕಲಿತುಕೊಳ್ಳುವೆ
ನನ್ನ ಮೇಲಿನ ಟೀಕೆಗಳಿಂದಲೂ
ಹೊಗಳಿಕೆಗಳಿಂದಲೂ
ಹೆಮ್ಮೆ ಪಡುವೆನು
ಏಕಂದರೆ
ನಾನು ಅವೆರಡಕ್ಕೂ
ಅರ್ಹನೆಂಬುವದರಿಂದ
ನನ್ನ ಬಗೆಗಿನ
ಆಲೋಚನೆಯಲ್ಲೇ
ನಿಮ್ಮನ್ನೂ
ಮರೆತು ಬಿಡುತ್ತಿರುವಿರಿ
ಎಂಬುವುದೇ ನನ್ನ ಚಿಂತೆ
ಈ ಲೋಕ
ಎಲ್ಲರಿಗೂ ಸೇರಿದ್ದು
ಭುವಿ ನನಗೆ ಮಾತ್ರ ಸುತ್ತುವುದಿಲ್ಲ
ನನ್ನ
ಹುಡುಕುವುದ ಬಿಟ್ಟು
ನಿಮ್ಮನ್ನು ಹುಡುಕಿ
ನಿಜ ತಿಳಿಯುವುದು
ನನ್ನ ಪಥವ
ನನ್ನ ಪಯಣವ
ನಾನೇ ತೀರ್ಮಾನಿಸುವೆ
ಸಾಧ್ಯವಾದರೆ
ಹಿಂಬಾಲಿಸಿ
ಇಲ್ಲದಿರೆ
ಬಿಟ್ಟು ಹೊರಡಿ
ನಾನು ಸಾಗಬೇಕಾದ ದೂರ
ಇನ್ನೂ ಇದೆ
ಅನುವಾದಕರ ಚಿಕ್ಕ ಪರಿಚಯ:
ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿದ್ದಾರೆ. ಪದ್ಮಭೂಷಣ ಡಾ.ವೈರಮುತ್ತು ಅವರ ಕವಿತೆಗಳನ್ನ, 2009ರಲ್ಲಿ ‘ವೈರಮುತ್ತುವರ 33 ಕವಿತೆಗಳು’ ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ತಮಿಳಿನ ಮೊದಲ ಜ್ಞಾನಪೀಠ ಪುರಸ್ಕೃತರಾದ ‘ಅಖಿಲನ್’ ಅವರ ಕುರಿತು ಕೃತಿ ರಚಿಸಿದ್ದಾರೆ. ಕುವೆಂಪು ಆದಿಯಾಗಿ ಕನ್ನಡದ ಖ್ಯಾತ ಲೇಖಕರ ಕವಿತೆಗಳನ್ನ ತಮಿಳಿಗೆ ಅನುವಾದ ಮಾಡಿದ್ದಾರೆ. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಕೃತಿಗಳನ್ನ ಅನುವಾದಿಸಿರುವ ಡಾ.ಮಲರ್ ವಿಳಿ ಕೆ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಹಿಡಿತ ಸಾಧಿಸಿದ್ದಾರೆ. ಇದೀಗ ಜಪಾನಿ ಭಾಷೆ ಕಲಿಯುತ್ತಿದ್ದಾರೆ. ಇವರ ಅನುವಾದ ಕೃಷಿಗೆ ಹತ್ತು ಹಲವು ಪ್ರಶಸ್ತಿಗಳು ದೊರೆತಿವೆ.