ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೊನೆಗೂ ಬಿಜೆಪಿ ರಾಜ್ಯಾಧ್ಯಕ್ಷ ನೇಮಕ ಬಳಿಕ ವಿಪಕ್ಷ ನಾಯಕನ ಆಯ್ಕೆ ಮಾಡಿದೆ. ಶುಕ್ರವಾರ ಸಂಜೆ ನಡೆದ ಸಭೆಯಲ್ಲಿ ಆರ್.ಅಶೋಕ್ ಅವರನ್ನು ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಮೂಲಕ ಕಳೆದ 6 ತಿಂಗಳಿಂದ ಖಾಲಿಯಿದ್ದ ವಿಪಕ್ಷ ನಾಯಕನ ಸ್ಥಾನಕ್ಕೆ ಆರ್.ಅಶೋಕ್ ಬಂದಿದ್ದಾರೆ.
ನೂತನ ವಿಪಕ್ಷ ನಾಯಕರಾಗಿ ಆರ್.ಅಶೋಕ್ ಆಯ್ಕೆ ಆಗುತ್ತಿದ್ದಂತೆ ಆಂತರಿಕ ಹಾಗೂ ಬಹಿರಂಗ ಆಕ್ರೋಶಗಳು ಹೆಚ್ಚಾಗುತ್ತಿವೆ. ರಾಜ್ಯಾಧ್ಯಕ್ಷ ಅಥವ ವಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ನಾಯಕರಿಗೆ ನಿರಾಸೆಯಾಗಿದೆ. ಹೀಗಾಗಿ ಒಳ ಬೇಗುದಿ ಜೋರಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಪಾಳೆಯದ ಆರ್.ಅಶೋಕ್ ವಿಪಕ್ಷ ನಾಯಕರಾಗಿದ್ದಾರೆ. ಮಗ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿಯ ಹಿಡಿತ ಬಿಎಸ್ವೈ ಕೈಗೆ ಹೋಗಿದೆ.
ಜಾತಿ ಲೆಕ್ಕಾಚಾರದ ಮೇಲೆ ನೋಡಿದರೆ ಲಿಂಗಾಯತ ಸಮುದಾಯದ ವಿಜಯೇಂದ್ರ ರಾಜ್ಯಾಧ್ಯಕ್ಷ, ಒಕ್ಕಲಿಗ ಸಮುದಾಯದ ಆರ್.ಅಶೋಕ್ ವಿಪಕ್ಷ ನಾಯಕ. ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಪ್ರಬಲವಾಗಿರುವ ಎರಡೂ ಜಾತಿಯ ನಾಯಕರಿಗೆ ಉನ್ನತ ಸ್ಥಾನ ನೀಡುವ ಮೂಲಕ ಬಿಜೆಪಿಯಲ್ಲಿ ಅಹಿಂದ ವರ್ಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಮಾತು ನಿಜವಾಗಿದೆ ಎಂದು ಹೇಳಲಾಗುತ್ತಿದೆ. 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ನೇಮಕಗಳು ನಡೆದಿದ್ದು, ಬಿಜೆಪಿ ಎಷ್ಟು ಪ್ಲಸ್ ಆಗುತ್ತೆ ಅನ್ನೋದು ಮತದಾರ ನಿರ್ಧರಿಸುತ್ತಾನೆ.