ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಇಂದು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ 80ನೇ ಹುಟ್ಟು ಹಬ್ಬ ಹಾಗೂ ಅವರ ರಾಜಕೀಯ ಕ್ಷೇತ್ರದಲ್ಲಿ ನಿರ್ಮಾಣವಾದ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ, ಯಡಿಯೂರಪ್ಪನವರನ್ನು ಹಾಡಿ ಹೊಗಳಿದರು. ಆದರೆ, ಒಮ್ಮೆಯೂ ಮುಖ್ಯಮಂತ್ರಿ ಬೊಮ್ಮಾಯಿ ಹೆಸರು ಪ್ರಸ್ತಾಪಿಸಲಿಲ್ಲ.
ಯಡಿಯೂರಪ್ಪ ರಾಜಕೀಯ ಜೀವನ, ಹೋರಾಟದ ಹಾದಿ, ರೈತಪರ ಯೋಜನೆಗಳು ಸೇರಿ ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದರು. ಬಿಜೆಪಿ ಆಡಳಿತದ ಬಗ್ಗೆ ಮಾತನಾಡಿದರು. ಈ ವೇಳೆ ಬೊಮ್ಮಾಯಿ ನೇತೃತ್ವದ ಸರ್ಕಾರದ ಕಾರ್ಯವೈಖರಿ ಎಂದು ಹೇಳಲಿಲ್ಲ. ಬರೀ ಬಿಜೆಪಿ ಸರ್ಕಾರವೆಂದು ಹೇಳುತ್ತಾ ಹೋದರು.
ಕಳೆದ ವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ವೇಳೆಯೂ ಅಮಿತ್ ಶಾ, ಸಿಎಂ ಬೊಮ್ಮಾಯಿ ಹೆಸರು ಪ್ರಸ್ತಾಪಿಸದೆ ಮಾತನಾಡಿದರು. ಇದರಿಂದಾಗಿ ಕೇಂದ್ರ ನಾಯಕರು ಉದ್ದೇಶಪೂರ್ವಕವಾಗಿ ಬೊಮ್ಮಾಯಿ ಅವರನ್ನು ಸೈಡ್ ಲೈನ್ ಮಾಡಲು ಹೊರಟಿದ್ದಾರೆ ಅನ್ನೋ ಚರ್ಚೆ ಹುಟ್ಟು ಹಾಕಿದೆ. ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸದೆ ಮತ್ತೆ ಮೋದಿ ಹೆಸರಿನ ಮೂಲಕ ರಾಜ್ಯ ಚುನಾವಣೆ ನಡೆಸುವ ಯತ್ನ ಎನ್ನಲಾಗುತ್ತಿದೆ. ಇದೆ ಕಾರಣಕ್ಕೆ ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಪದೆಪದೆ ರಾಜ್ಯ ಆಗಮಿಸುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳು.