ಪ್ರಜಾಸ್ತ್ರ ಸುದ್ದಿ
ಎರ್ನಾಕುಲಂ: ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಸರಣಿ ಸ್ಫೋಟಗಳು ಸಂಭವಿಸಿದ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಕೊಚ್ಚಿಯ ಕಲಮಸ್ಸೆರಿ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, 36ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಜಮ್ರಾ ಅಂತಾರಾಷ್ಟ್ರೀಯ ಸಮಾವೇಶ ಹಾಗೂ ಪ್ರದರ್ಶನ ಕೇಂದ್ರದಲ್ಲಿ ನಡೆದ ಯೆಹೋವನ್ ಪ್ರಾರ್ಥನಾ ಸಭೆಯ ವೇಳೆ ಸ್ಫೋಟ ನಡೆದಿದೆ. ಸಭೆಯಲ್ಲಿ 2 ಸಾವಿರಕ್ಕೂ ಹೆಚ್ಚು ಜನರಿದ್ದರು ಎಂದು ತಿಳಿದು ಬಂದಿದೆ. ಸ್ಫೋಟ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇರಳ ಸಿಎಂ ಪಿಣಿರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಸ್ಫೋಟ ಸಂಬಂಧ ಕೇರಳ ಸಿಎಂ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಘಟನೆ ನಡೆದಿರುವುದು ದುರದುಷ್ಟಕರ ಎಂದಿದ್ದಾರೆ. ಗಾಯಗೊಂಡವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.