ಪ್ರಜಾಸ್ತ್ರ ಸುದ್ದಿ
ತುಮಕೂರು: ಸರ್ಕಾರಿ ಶಾಲೆಗಳಲ್ಲಿ ನೀಡುವ ಮಧ್ಯಾಹ್ನ ಬಿಸಿ ಊಟದ ಯೋಜನೆಗೆ ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿ ‘ಅನ್ನದಾಸೋಹ’ ಎಂದು ಹೆಸರಿಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಶ್ರೀಗಳ 115ನೇ ಜಯಂತಿ ಕಾರ್ಯಕ್ರಮ ಮಠದ ಆವರಣದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಮಾತನಾಡಿದ ಸಿಎಂ, ಏಪ್ರಿಲ್ 1 ಶ್ರೀಗಳ ಜನ್ಮದಿನ. ಮಧ್ಯಾಹ್ನ ಬಿಸಿ ಊಟದ ಯೋಜನೆಗೆ ಅವರ ಹೆಸರು ಇಡಲಾಗುವುದು. ಈ ಬಗ್ಗೆ ಶೀಘ್ರದಲ್ಲಿ ಸರ್ಕಾರದ ಆದೇಶ ಹೊರಡಿಸಲಾಗುವುದು.
ತ್ರಿವಿಧ ದಾಸೋಹದ ಮೂಲಕ ಅಸಂಖ್ಯಾತ ಮಕ್ಕಳ ಬದುಕು ಕಟ್ಟಿಕೊಟ್ಟಿದ್ದಾರೆ. ಸುಮಾರು 88 ವರ್ಷಗಳ ಕಾಲ ಮಠದ ಸೇವೆ ಮಾಡಿದ್ದಾರೆ. ಶ್ರೀಗಳು ಹಚ್ಚಿದ ಒಲೆ ನಿರಂತರವಾಗಿ ಉರಿಯುತ್ತಿದೆ. ಅವರು ನಮ್ಮ ನಡುವೆ ಜೀವಂತವಾಗಿದ್ದಾರೆ ಎಂದರು.