ಪ್ರಜಾಸ್ತ್ರ ವಿಶೇಷ
ಸಿಂದಗಿ: ಜೆಡಿಎಸ್ ಶಾಸಕರಾಗಿದ್ದ ಎಂ.ಸಿ ಮನಗೂಳಿಯವರ ನಿಧನದಿಂದಾಗಿ ಉಪ ಚುನಾವಣೆ ನಡೆದು ಹಳೆ ಮಾತಾಗಬೇಕಿತ್ತು. ಆದರೆ, ಕೋವಿಡ್ ನಿಂದಾಗಿ ಚುನಾವಣೆ ನಡೆಯಲಿಲ್ಲ. ಇದೀಗ ಉಪ ಚುನಾವಣೆ ಡಿಸೆಂಬರ್ ನಲ್ಲಿ ನಡೆಯುವ ಸಾಧ್ಯತೆಯಿದ್ದು, ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆಗಳು ನಡೆದಿವೆ. ಇದರ ನಡುವೆ ಮನಗೂಳಿ ಸಹೋದರರ ನಡುವೆ ಸ್ಪರ್ಧೆ ನಡೆಯುವ ಬಗ್ಗೆ ಗುಸುಗುಸು ಕೇಳಿ ಬರುತ್ತಿದೆ.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಅಶೋಕ ಮನಗೂಳಿ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಇದರ ನಡುವೆ ಜೆಡಿಎಸ್ ಅಭ್ಯರ್ಥಿ ಯಾರು ಅನ್ನೋ ಚರ್ಚೆಯ ಮಧ್ಯೆ ಡಾ.ಚನ್ನವೀರ(ಮುತ್ತು) ಮನಗೂಳಿ ಹೆಸರು ಕೇಳಿ ಬರುತ್ತಿದೆ. ಈ ಭಾಗದಲ್ಲಿ ಜೆಡಿಎಸ್ ಇಂದಿಗೂ ಉಳಿಯಲು ಎಂ.ಸಿ ಮನಗೂಳಿ ಕಾರಣ. ಅವರ ನಿಧನದ ಬಳಿಕ ಹಿರಿಯ ಪುತ್ರ ಅಶೋಕ ಮನಗೂಳಿ ಅಭ್ಯರ್ಥಿಯಾಗಬಹುದು ಅನ್ನೋದು ಕ್ಷೇತ್ರದ ಜನರ ಮಾತಾಗಿತ್ತು.
ಆದ್ರೆ, ಅಶೋಕ ಕಾಂಗ್ರೆಸ್ ಗೆ ಹೋಗಿ ಅಭ್ಯರ್ಥಿಯಾಗಿರುವುದರಿಂದ ಜೆಡಿಎಸ್ ಗೆ ಯಾರು ಅನ್ನೋ ಪ್ರಶ್ನೆಯ ನಡುವೆ ಡಾ.ಚನ್ನವೀರ(ಮುತ್ತು)ಮನಗೂಳಿ ಹೆಸರು ಚರ್ಚೆಯಲ್ಲಿದೆ. ಹೀಗಾಗಿ ಸಹೋದರರ ನಡುವೆ ಸ್ಪರ್ಧೆ ಏರ್ಪಡುವ ಮಾತುಗಳು ಕೇಳಿ ಬರುತ್ತಿವೆ. ಆದ್ರೆ, ಡಾ.ಚನ್ನವೀರ ಮನಗೂಳಿ ನಾನಾಗಿಯೇ ಟಿಕೆಟ್ ಕೇಳುತ್ತಿಲ್ಲ. ನನ್ನ ಹೆಸರು ಕೇಳಿ ಬರುತ್ತಿದೆ ಅಂತಿದ್ದಾರೆ. ಹೀಗಾಗಿ ಅಣ್ಣ ತಮ್ಮನ ನಡುವೆ ರಾಜಕೀಯ ಸವಾಲ್ ನಡೆದರೆ ಅಚ್ಚರಿ ಪಡಬೇಕಿಲ್ಲ.