ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಮಂಗಳವಾರ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 1ರಂದು ನೋಟಿಫಿಕೇಷನ್ ಹೊರಡಿಸಲಾಗುತ್ತೆ. ಅಕ್ಟೋಬರ್ 8 ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕ. ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನಾಂಕ ಅಕ್ಟೋಬರ್ 13 ಆಗಿದೆ.
ಅಕ್ಟೋಬರ್ 30ರಂದು ಮತದಾನ ಹಾಗೂ ನವೆಂಬರ್ 2ರಂದು ಫಲಿತಾಂಶ ಹೊರ ಬೀಳಲಿದೆ. ಹೀಗಾಗಿ ಮತಕ್ಷೇತ್ರದಲ್ಲಿ ಇಂದಿನಿಂದಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಸಿಂದಗಿ ಉಪ ಚುನಾವಣೆ ಕುರಿತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಅನೇಕರು ಸಮರ ಶುರು ಮಾಡಿದ್ದಾರೆ.
ಇವರೆ ನಮ್ಮ ಮುಂದಿನ ಶಾಸಕರು ಅನ್ನೋರ ನಡುವೆ, ಹೊಸಬರು ಬರಬೇಕು ಅನ್ನೋ ಚರ್ಚೆ ಸಹ ಜೋರಾಗಿದೆ. ಇದರ ಜೊತೆಗೆ ಜಾತಿ ಲೆಕ್ಕಾಚಾರದ ಮಾತುಗಳು ಜೋರಾಗಿವೆ. ಹೀಗಾಗಿ ಕೆಲವರು ನಮ್ಮ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ. ಈ ಚುನಾವಣೆಯಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಹೇಳುವ ಮೂಲಕ, ರಾಜಕೀಯ ನಾಯಕರಿಗೆ ಎಚ್ಚರಿಕೆ ನೀಡುವ ಕೆಲಸ ಮೊದಲ ದಿನದಿಂದಲೇ ಶುರುವಾಗಿದ್ದು, ಇನ್ನೊಂದು ತಿಂಗಳು ಕಾಲ ಸಿಂದಗಿ ಮತಕ್ಷೇತ್ರದಲ್ಲಿ ಬರೀ ರಾಜಕೀಯ.