ಪ್ರಜಾಸ್ತ್ರ ಸುದ್ದಿ
ಚೆನ್ನೈ: ಜಾತಿಯ ಕಾರಣಕ್ಕೆ ತಮಿಳುನಾಡಿನ ಕಡಲೂರಿನಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯನ್ನೇ ನೆಲದ ಮೇಲೆ ಕೂರಿಸಿದ ಘಟನೆ ನಡೆದಿದೆ. ಸಂವಿಧಾನಬದ್ಧವಾಗಿ ಜನರಿಂದ ಆಯ್ಕೆಯಾಗಿ ಬಂದು, ಮೀಸಲಾತಿ ಆಧಾರದ ಮೇಲೆ ಅಧ್ಯಕ್ಷೆಯಾಗಿದ್ದಾರೆ. ಆದ್ರೆ, ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಅನ್ನೋ ಕಾರಣಕ್ಕೆ ಉಪಾಧ್ಯಕ್ಷ ಸೇರಿದಂತೆ ಇಲ್ಲಿನವರು ಅಮಾನವೀಯವಾಗಿ ನಡೆಸಿಕೊಳ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.
ತೆರ್ಕು ತಿಟ್ಟೈ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿದ್ರೂ, ಸಭೆ ಸಮಾರಂಭಗಳಲ್ಲಿ ವೇದಿಕೆ ಮೇಲೆ ಕೂರುವಂತಿಲ್ಲ. ಧ್ವಜಾರೋಹಣ ಮಾಡುವಂತಿಲ್ಲ. ಮೇಲ್ಜಾತಿಯವರಿಂದ ಲೈಂಗಿಕ ಕಿರುಕುಳ ಸಹ ಹೆಚ್ಚಾಗಿವೆ ಎಂದು ಹೇಳಿದ್ದಾರೆ. ಈ ಘಟನೆ ಸಂಬಂಧ ಜಿಲ್ಲಾಧಿಕಾರಿ ಚಂದ್ರಶೇಖರ ಶಖಾಮುರಿ, ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯನ್ನ ಅಮಾನತು ಮಾಡಿದ್ದು, ತನಿಖೆಗೆ ಮುಂದಾಗಿದ್ದಾರೆ.
ದ್ರಾವಿಡ್ ನೆಲದಲ್ಲಿ ಇಂದಿಗೂ ಜಾತಿ ತಾರತಮ್ಯ ಜೀವಂತವಾಗಿದೆ ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ. ಮಧುರೈ ಜಿಲ್ಲೆಯ ಕಿರಿಪಟ್ಟಿ, ನತ್ತರ್ಮಂಗಲಂ, ಪಪ್ಪಕಿಟ್ಟಿ ಗ್ರಾಮ ಪಂಚಾಯ್ತಿಗಳಿಗೆ ಮೀಸಲಾತಿ ಇದ್ದರೂ, ಕಳೆದ 30 ವರ್ಷಗಳಿಂದ ಯಾರೂ ಸ್ಪರ್ಧಿಸಿಲ್ಲವಂತೆ. ಯಾರಾದ್ರೂ ಸ್ಪರ್ಧೆ ಮಾಡಿದ್ರೆ ಅವರಿಂದ ಬಲವಂತದಿಂದ ರಾಜೀನಾಮೆ ಕೊಡಿಸುತ್ತಾರಂತೆ. ಅಷ್ಟರ ಮಟ್ಟಿಗೆ ಇಲ್ಲಿ ಮೇಲ್ಜಾತಿಯವರ ಕಿರುಕುಳವಿದ್ದು, ವೋಟ್ ಸಲುವಾಗಿ ರಾಜಕೀಯ ಪಕ್ಷಗಳು ದೌರ್ಜನ್ಯವನ್ನ ತಡೆಯಲು ಆಗ್ತಿಲ್ಲವೆಂದು ಹೇಳ್ತಿದ್ದಾರೆ.