ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಇತ್ತೀಚೆಗೆ ನಿಧನರಾದ ರಾಜಕಾರಣಿ, ನಟ, ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಮ್ ಪತ್ನಿ ವಾಣಿ ಶಿವರಾಮ್ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು.
ಈ ವೇಳೆ ಮಾತನಾಡಿದ ಅವರು, ಕೆ.ಶಿವರಾಮ್ ಜನಪ್ರಿಯ ಅಧಿಕಾರಿಯಾಗಿದ್ದರು. ಜನ ಸೇವೆಯನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗಬೇಕೆಂದು ರಾಜಕೀಯಕ್ಕೆ ಬಂದರು. ಆದರೆ, ಬಿಜೆಪಿ ಅವರಿಗೆ ಮೋಸ ಮಾಡಿದೆ. ಅವರು ಗುರಿಯನ್ನು ಹಾಗೇ ಉಳಿಸಿ ಹೋಗಿದ್ದಾರೆ. ಅದನ್ನು ನಾನು ಮುಂದುವರೆಸುತ್ತೇನೆ ಎಂದರು.
ಕೆ.ಶಿವರಾಮ್ ಅವರನ್ನು ಬಿಜೆಪಿಯವರು ದುಡಿಸಿಕೊಂಡರು. ಸ್ಥಾನಮಾನ ಕೊಡಲಿಲ್ಲ. ದಲಿತ ಎನ್ನುವ ಕಾರಣಕ್ಕೆ ಬೆಳಸಲಿಲ್ಲ. ಬಳಸಿಕೊಂಡರು. ನಮ್ಮ ಯಜಮಾನರಿಗೆ ಆದ ಅನ್ಯಾಯ ಮುಂದೆ ಯಾರಿಗೂ ಆಗಬಾರದು. ನನ್ನನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ಸೇರಿಸಿಕೊಂಡಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.
ಇದೇ ವೇಳೆ ಆರ್.ಆರ್ ನಗರ ಮಾಜಿ ಕಾರ್ಪೊರೇಟರ್ ರೂಪ ಲಿಂಗೇಶ್, ಮಡಿವಾಳ ಸಮುದಾಯದ ಮುಖಂಡ ಗೋಪಿ ಕೃಷ್ಣ, ಛಲವಾದಿ ಸಮುದಾಯದ ಅನೇಕ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.