ಗುಬ್ಬಿ: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ತಿಪ್ಪೂರಿನಲ್ಲಿ ನೂರಾರು ತೆಂಗು, ಅಡಿಕೆ ಮರಗಳನ್ನ ಕಡಿಸಿದ ಪ್ರಕರಣಕ್ಕೆ ಸಂಬಂಧಿಸಿದೆ ಇದೀಗ ತಹಶೀಲ್ದಾರ್ ತಲೆ ದಂಡವಾಗಿದೆ. ನಿನ್ನೆ ಗ್ರಾಮ ಲೆಕ್ಕಿಗ ಮುರುಳಿ ಅಮಾನತು ಮಾಡಲಾಗಿತ್ತು. ಇಂದು ತಹಶೀಲ್ದಾರ್ ಗೆ ಗೇಟ್ ಪಾಸ್ ಕೊಡಲಾಗಿದೆ.
ಗುಬ್ಬಿ ತಹಶೀಲ್ದಾರ್ ಆಗಿದ್ದ ಎಂ.ಮಮತಾ ಅವರನ್ನ ಹುದ್ದೆಯಿಂದ ಹಿಂದಕ್ಕೆ ಪಡೆಯಲಾಗಿದೆ. ಈ ಸಂಬಂಧ ತಹಶೀಲ್ದಾರ್ ಮಮತಾ ಅವರನ್ನ ವಿಧಾನಸೌಧಕ್ಕೆ ಕರೆಸಿಕೊಂಡಿದ್ದ ಕಂದಾಯ ಸಚಿವ ಆರ್.ಅಶೋಕ, ತೀವ್ರ ತರಾಟಗೆ ತೆಗೆದುಕೊಂಡಿದ್ದಾರೆ. ಮಮತಾ ಅವರಿಂದ ಮಾಹಿತಿ ಪಡೆದಿರುವ ಸಚಿವರು, ತಹಶೀಲ್ದಾರ್ ಹುದ್ದೆಯನ್ನ ಹಿಂದಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು, ಅವರಿಗೆ ಯಾವುದೇ ಹುದ್ದೆ ನೀಡದೆ ಉಳಿಸಿಕೊಂಡಿದೆ.
ಸಿದ್ದಮ್ಮ ಎಂಬುವವರು ದೇವಸ್ಥಾನದ 20 ಗುಂಟೆ ಜಾಗವನ್ನ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಆದೇಶದ ಮೇರೆಗೆ ಗ್ರಾಮ ಲೆಕ್ಕಿಗ ನೂರಾರು ಮರಗಳನ್ನ ಧರೆಗುರುಳಿಸಿದ್ದ. ಇದೀಗ ಇವರಿಬ್ಬರಿಗೂ ತಕ್ಕ ಶಿಕ್ಷೆಯಾಗಿದೆ. ಸಿದ್ದಮ್ಮಗೆ ಸರ್ಕಾರ ಏನು ಪರಿಹಾರ ನೀಡುತ್ತೆ ಕಾದು ನೋಡಬೇಕು.