ಬೆಳಗಾವಿ: ಬಸವ ಪರಿವಾರ ಜಾಗೃತಿ ಸಮಾವೇಶದಲ್ಲಿ ಬಸವ ಸಂಸತ್ತು ರಚನೆಗೆ ಅಂಗೀಕಾರ ನೀಡಲಾಯ್ತು. ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಮಾವೇಶದಲ್ಲಿ ಬಸವ ಸಂಸತ್ತು ರಚನೆಗೆ ಅನುಮೋದನೆ ನೀಡಲಾಯ್ತು.
ಬಸವ ಸಂಸತ್ತಿನ ಪ್ರಥಮ ಅಧ್ಯಕ್ಷರನ್ನಾಗಿ ಆರ್.ಎಸ್.ದರ್ಗೆ ಅವರನ್ನ ಸರ್ವ ಸಮ್ಮತದಿಂದ ಆಯ್ಕೆ ಮಾಡಲಾಯಿತು. ಹೀಗಾಗಿ ಬಸವ ಸಂಸತ್ತು ರಚನೆಯ ಸಂಪೂರ್ಣ ಹೊಣೆಗಾರಿಕೆಯನ್ನ ಅವರಿಗೆ ವಹಿಸಲಾಗಿದೆ. ಸಾಣೇಹಳ್ಳಿ ಶ್ರೀಗಳು ಹಮ್ಮಿಕೊಂಡಿರುವ ಮತ್ತೆ ಕಲ್ಯಾಣ ಆಂದೋಲನಕ್ಕೆ ಸಮಾವೇಶವು ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದೆ.
ಈ ವೇಳೆ ಸರ್ಕಾರ, ಬಸವ ಪರಂಪರೆಯ ಮಠಗಳು ಮುಂದಿನ ದಿನಗಳಲ್ಲಿ ಏನು ಮಾಡಬೇಕು ಅನ್ನೋ ವಿಷಯಗಳನ್ನ ಚರ್ಚಿಸಲಾಯ್ತು. ಅದರಲ್ಲಿ ಪ್ರಮುಖವಾಗಿ, ಬಸವ ಪರಂಪರೆಯ ಮಠಾಧೀಶರೆಲ್ಲರು ಕೂಡಿಕೊಂಡು ಮಠದ ಆದಾಯ, ಭಕ್ತರ ದೇಣಿಗೆ ಮತ್ತು ಸರ್ಕಾರದ ಅನುದಾನ ಪಡೆದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅನುಭವ ಮಂಟಪ ನಿರ್ಮಿಸಬೇಕು. ಬಸವ ಅಂಬೇಡ್ಕರರ ವಿರೋಧಿಗಳಿಂದ ಅಂತರ ಕಾಯ್ದುಕೊಳ್ಳಬೇಕು. ಪರಿಪೂರ್ಣ ಬಸವ ತತ್ವಗಳ ಪಾಲನೆ ಮಾಡಬೇಕು. ಬಸವ ಪರಿವಾರ ಒಂದಾಗಿಸುವ ಮೂಲಕ ಬಸವಾದಿ ಶರಣರ ಕರ್ಮಭೂಮಿ ಕರ್ನಾಟಕವನ್ನ ಕಲ್ಯಾಣ ರಾಜ್ಯವಾಗಿಸುವ ದಿಸೆಯಲ್ಲಿ ಸಮಾಜದ ಪ್ರಜ್ಞಾವಂತರು ಶರಣ ಚಳುವಳಿಯನ್ನ ಆರಂಭಿಸಬೇಕು. ಕೇಂದ್ರ ಸರಕಾರ ತಕ್ಷಣ ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಕೊಡಬೇಕು ಸೇರಿದಂತೆ ಸಾಕಷ್ಟು ವಿಚಾರಗಳನ್ನ ಚರ್ಚಿಸಲಾಯ್ತು.
ಬಸವ ಸಂಸ್ಕೃತಿಯನ್ನ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಮನುವಾದಿಗಳು ಅಟ್ಟಹಾಸ ನಿಲ್ಲಿಸಬೇಕು ಎಂದು ಸಮಾವೇಶ ಎಚ್ಚರಿಕೆ ನೀಡಿದೆ ಅಂತಾ ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ತಿಳಿಸಿದ್ದಾರೆ.