ಪ್ರಜಾಸ್ತ್ರ ಅಪರಾಧ ಸುದ್ದಿ
ದೆಹಲಿ: ಇವತ್ತಿನ ಸಮಾಜದಲ್ಲಿ ಮನುಷ್ಯ ಸಂಬಂಧಗಳು ಎಷ್ಟು ಸಡಿಲಗೊಳ್ಳುತ್ತಿವೆ ಎಂದರೆ, ಇಷ್ಟಪಟ್ಟವರನ್ನೇ ಕ್ರೂರವಾಗಿ ಹತ್ಯೆ ಮಾಡುವ ಮಟ್ಟಕ್ಕೆ ಬಂದಿದೆ. ಇಲ್ಲೊಬ್ಬ ಕ್ರೂರಿ ಲಿವಿಂಗ್ ತನ್ನ ಪ್ರೇಯಸಿಯನ್ನು ಕೊಂದು, ಮೃತದೇಹವನ್ನು 35 ತುಂಡುಗಳನ್ನಾಗಿ ಮಾಡಿ, ನಗರದ ಬೇರೆ ಬೇರೆ ಭಾಗದಲ್ಲಿ ಎಸೆದಿದ್ದ ಭಯಾನಕ ಘಟನೆ ಬೆಳಕಿಗೆ ಬಂದಿದೆ.
ಶ್ರದ್ಧಾ ಮದನ್ ವಾಲ್ಕರ್(26) ಹಾಗೂ ಅಫ್ತಾಬ್ ಅಮೀನ್ ಪೂನಾವಾಲ್(28) ಮುಂಬೈನಲ್ಲಿ ಅಂತಾರಾಷ್ಟ್ರೀಯ ಕಾಲ್ ಸೆಂಟರ್ ಕಂಪನಿವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪರಿಚಯವಾಗಿದೆ. ನಂತರ ಡೇಟಿಂಗ್ ನಡೆಸಿದ್ದಾರೆ. ಇದು ಮನೆಯವರಿಗೆ ತಿಳಿದು ವಿರೋಧಿಸಿದ್ದಾರೆ. ಆಗ ಶ್ರದ್ಧಾ ಹಾಗೂ ಅಫ್ತಾಬ್ ಏಪ್ರಿಲ್ ಕೊನೆಯ ತಿಂಗಳಲ್ಲಿ ದೆಹಲಿಗೆ ಬಂದು ಲಿವಿಂಗ್ ಇನ್ ರಿಲೇಷನ್ ನಲ್ಲಿದ್ದಾರೆ.
ಆದರೆ, ಕಳೆದ ಎರಡು ತಿಂಗಳಿಂದ ಶ್ರದ್ಧಾ ಫೋನ್ ಸ್ವಿಚ್ ಆಫ್ ಬರ್ತಿದೆ ಎಂದು ಆಕೆ ಸ್ನೇಹಿತರು ಆಕೆ ಅಣ್ಣನಿಗೆ ಹೇಳಿದ್ದಾರೆ. ಕಳೆದ ನವೆಂಬರ್ 8ರಂದು ಶ್ರದ್ಧಾ ತಂದೆ ದೆಹಲಿಗೆ ಬಂದು ಮಗಳನ್ನು ಹುಡುಕಿದ್ದಾರೆ. ಆಕೆ ಸಿಕ್ಕಿಲ್ಲ. ಮನೆ ಬೀಗ ಹಾಕಿರುವುದು ಕಂಡು ಬಂದಿದೆ. ಆಗ ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದಾರೆ. ಪೊಲೀಸರು ಅಫ್ತಾಬ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೃದಯವಿದ್ರಾವಕ ಕೃತ್ಯ ಬೆಳಕಿಗೆ ಬಂದಿದೆ.
ಕಳೆದ ಮೇ 18ರಂದು ಶ್ರದ್ಧಾ ಹಾಗೂ ಅಫ್ತಾಬ್ ನಡುವೆ ಮದುವೆ ವಿಚಾರಕ್ಕೆ ಗಲಾಟೆಯಾಗಿದೆ. ಆಗ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ 300 ಲೀಟರ್ ಸಾಮರ್ಥ್ಯದ ಫ್ರಿಡ್ಜ್ ಖರೀದಿಸಿದ್ದಾನೆ. ಮೃತದೇಹವನ್ನು 35 ತುಂಡುಗಳನ್ನು ಮಾಡಿ ಮುಂದಿನ 18 ದಿನಗಳ ಕಾಲ ಏರಿಯಾದ ಬೇರೆ ಬೇರೆ ಭಾಗಗಳಲ್ಲಿ ಎಸೆದಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದಕ್ಕಾಗಿ ಆತ ಪ್ರತಿದಿನ ಮುಂಜಾನೆ 2 ಗಂಟೆಗೆ ಎದ್ದು ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಈ ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ.