ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ನಟ ದರ್ಶನ ಹೆಸರಿನಲ್ಲಿ 25 ಕೋಟಿ ರೂಪಾಯಿ ಲೋನ್ ಗೆ ಅರ್ಜಿ ಹಾಕುವ ಪ್ಲಾನ್ ಮೂಲಕ ವಂಚನೆಗೆ ಯತ್ನಿಸಿದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿ ಅರುಣಾಕುಮಾರಿಯನ್ನ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ.
ಅರುಣಾಕುಮಾರಿ ಹಾಗೂ ನಿರ್ಮಾಪಕ ಉಮಾಪತಿ ನಡುವೆ ನಡೆದ ವಾಟ್ಸಪ್ ಚಾಟ್ಸ್ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ ವಾಗ್ದಾಳಿ ನಡೆಸಿರುವ ಉಮಾಪತಿ, ನಾವೇನು ಅಶ್ಲೀಲ ಚಾಟ್ ನಡೆಸಿದ್ದೇವಾ ಎಂದು ಕೇಳಿದ್ದಾರೆ. 2 ಎಕರೆಯಲ್ಲಿ ರೆಸಾರ್ಟ್ ಮಾಡಿರುವ ಹರ್ಷಾ, ಮೈಸೂರು ಪೊಲೀಸರನ್ನ ಕಂಟ್ರೋಲ್ ಮಾಡುವ ರೀತಿ ಮಾತ್ನಾಡ್ತಾನೆ. ನಾನು ನೂರಾರು ಎಕರೆ ಜಮೀನು ಇಟ್ಟುಕೊಂಡು ಕೆಲಸ ಮಾಡಿಕೊಂಡು ಸುಮ್ನೆ ಇದೀನಿ ಅಂತಾ ವಾಗ್ದಾಳಿ ನಡೆಸಿದ್ರು.
ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುವ ಪ್ಲಾನ್ ನಡೆಸಿದ್ದಾರೆ. ಬೆಂಗಳೂರಲ್ಲಿ ಒಂದು ಕಾನೂನು, ಮೈಸೂರಿನಲ್ಲಿ ಒಂದು ಕಾನೂನು ಇದ್ಯಾ. ಎಲ್ಲರಿಗೂ ಒಂದೇ ಕಾನೂನು. ಹೀಗಾಗಿ ಪೊಲೀಸರು ತನಿಖೆ ನಡೆಸುವ ತನಕ ಸುಮ್ಮನಿರಬೇಕು. ದರ್ಶನ ಸರ್ ಹೇಳಿದ ಒಂದು ಮಾತಿಗೆ ಸುಮ್ಮನಿದ್ದೇನೆ. ಅವರಿಗೆ ನನ್ನ ಮೇಲೆ ನಂಬಿಕೆಯಿದೆ ಎಂದಿದ್ದಾರೆ. ಅವರನ್ನ ನಾನು ಕಳೆದುಕೊಳ್ಳಲು ಇಷ್ಟವಿಲ್ಲ. ಇದರಿಂದ ದೊಡ್ಡ ಪಾಠ ಕಲಿತಿದ್ದೇನೆ. ಇನ್ನು ಮುಂದೆ ಯಾವುದೇ ವಿಚಾರಕ್ಕೂ ಹೋಗುವುದಿಲ್ಲವೆಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.