ಪ್ರಜಾಸ್ತ್ರ ವಿಶೇಷ ವರದಿ, ಮಹಾಂತೇಶ ಪಠಾಣಿ
ಅಳ್ನಾವರ: ಕಳೆದ 2016-17ರಲ್ಲಿ ಗಾಂಧಿ ಪುರಸ್ಕಾರ ಪಡೆದ ತಾಲೂಕಿನ ಅರವಟಗಿ ಗ್ರಾಮ ಪಂಚಾಯ್ತಿಯ ಈಗಿನ ಪರಿಸ್ಥಿತಿ ನೋಡಿದರೆ, ಅಯ್ಯೋ ಇದಕ್ಕೇನಾಯಿತು ಅಂತಾ ಕೇಳುತ್ತೀರಿ. ಗಾಂಧಿ ಪುರಸ್ಕಾರ ಪಡೆದ ಪಂಚಾಯ್ತಿ ಇನ್ನಷ್ಟು ಸುಧಾರಣೆಯಾಗುವ ಬದಲು, ಹಾಳು ಕೊಂಪೆಯಾಗಿ ಬದಲಾಗಿದೆ.
ಪಂಚಾಯ್ತಿ ಆವರಣದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ ಕಾಣಿಸುತ್ತೆ. ಇಲ್ಲಿಗೆ ಬರುವ ಗ್ರಾಮಸ್ಥರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಕಟ್ಟಡದ ಕಿಟಕಿಯ ಗ್ಲಾಸ್ ಗಳು ಸಹ ಒಡೆದು ಹೋಗಿವೆ. ಮದ್ಯ ಸೇವನೆ ಮಾಡಿ ಎಲ್ಲೆಡೆ ಗಲೀಜು ಮಾಡಿ ಹೋಗುತ್ತಾರೆ. ಇದಕ್ಕೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯವೇ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ 7 ವರ್ಷಗಳಿಂದ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದರೂ, ಅಭಿವೃದ್ಧಿ ಅನ್ನೋದು ಮರಿಚಿಕೆಯಾಗಿದೆ. ತಮ್ಮ ಕಚೇರಿಯನ್ನೇ ಸರಿಯಾಗಿ ಇಟ್ಟುಕೊಳ್ಳದವರು ಗ್ರಾಮವನ್ನು ಇವರು ಅದೆಷ್ಟು ಅಭಿವೃದ್ಧಿ ಮಾಡಿರಬಹುದು ಅನ್ನೋ ಅನುಮಾನ ಮೂಡುತ್ತದೆ. ಎ ಅಂದಾ ಕಾನೂನು ಹೇ.. ಯಂಹಾ ಪೇ ಸಬ್ ಚಲ್ತಾ ಹೇ ಅನ್ನೋ ಮಾತಿನಂತೆ ಹೊರಟಿದೆ.
ಈ ಹಿಂದೆ ಗಾಂಧಿ ಪುರಸ್ಕಾರ ಪಡೆದಿರುವ ಹೆಮ್ಮೆ ಇರುವ ಪಂಚಾಯ್ತಿಯನ್ನು ಇನ್ನಷ್ಟು ಸುಧಾರಿಸಿ ಜನಸ್ನೇಹಿ ಮಾಡಬೇಕಿದೆ. ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಕಾಣಬೇಕೆ ಹೊರತು ಹಿಂದಕ್ಕೆ ಹೋಗಬಾರದು ಅನ್ನೋದು ಜನರ ಆಶಯ. ಇನ್ನು ಮುಂದೆಯಾದರೂ ಸುಧಾರಣೆ ಕಾಣುತ್ತಾ ಕಾದು ನೋಡಬೇಕಿದೆ.