ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶನಿವಾರ ಬಿಜೆಪಿ ವತಿಯಿಂದ ವಿಜಯ ಸಂಕಲ್ಪ ಯಾತ್ರೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಚಾಲನೆ ನೀಡಿದರು. ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಅಶ್ವಥನಾರಾಯಣ ಸೇರಿ ಜಿಲ್ಲೆಯ ಬಿಜೆಪಿ ಶಾಸಕರು, ಪರಿಷತ್ ಸದಸ್ಯರು, ಮಾಜಿ ಸದಸ್ಯರು ಭಾಗವಹಿಸಿದ್ದರು. ಆದರೆ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇತ್ತ ಸುಳಿಯಲಿಲ್ಲ. ಈ ಕುರಿತು ಇದೀಗ ಚರ್ಚೆ ಶುರುವಾಗಿದೆ.
ಯಡಿಯೂರಪ್ಪ ಹಾಗೂ ಅವರ ಕುಟುಂಬಸ್ಥರು, ಸಚಿವ ನಿರಾಣಿ ಸೇರಿದಂತೆ ತಮ್ಮ ಪಕ್ಷದ ಮುಖಂಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಯತ್ನಾಳಗೆ ಶಿಸ್ತು ಸಮಿತಿಯಿಂದ ನೋಟಿಸ್ ನೀಡಲಾಗಿದೆ ಎಂದು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಹೀಗಾಗಿ ದೆಹಲಿಗೆ ಹಾಜರಾಗಲು ಯತ್ನಾಳಗೆ ತಿಳಿಸಲಾಗಿದೆ.
ಯತ್ನಾಳ ವಿರೋಧ ಪಕ್ಷದವರಿಗಿಂತ ಹೆಚ್ಚು ತಮ್ಮ ಸಚಿವರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಕೆಟ್ಟ ಪದ ಬಳಕೆ ಮಾಡಿ ಮಾತನಾಡುತ್ತಿದ್ದಾರೆ. ಹೀಗಾಗಿಯೇ ವಿಜಯ ಸಂಕಲ್ಪ ಯಾತ್ರೆಯಿಂದ ಅವರನ್ನು ದೂರ ಇಡಲಾಗಿದೆಯಂತೆ. ಮುಂದೆ ನಡೆಯುವ ಬಿಜೆಪಿ ಸಮಾವೇಶ, ಕಾರ್ಯಕ್ರಮಗಳಿಂದಲೂ ಅವರನ್ನು ಹೊರಗಿಡುವ ಮೂಲಕ ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಯತ್ನಾಳ ಅವರ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ಹೈಕಮಾಂಡ್ ಸರಿಯಾದ ಟೈಂನಲ್ಲಿ ಕಟ್ಟಿ ಹಾಕಲು ಸಜ್ಜಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡುವ ಕುರಿತು ಚರ್ಚೆ ನಡೆಸಿದ್ದು, ಒಂದು ವೇಳೆ ಟಿಕೆಟ್ ನೀಡಿದರೆ ಅವರಿಗೆ ತಕ್ಕ ಪಾಠ ಕಲಿಸಲು ಸ್ವಪಕ್ಷೀಯರು ಸಜ್ಜಾಗಿದ್ದಾರೆ. ಹೇಗಾದರೂ ಮಾಡಿ ಸೋಲಿನ ರುಚಿ ತೋರಿಸುವ ಮೂಲಕ ವಿಜಯಪುರಕ್ಕೆ ನಾನೇ ಕಿಂಗ್ ಎನ್ನುತ್ತಿರುವ ಯತ್ನಾಳರನ್ನು ಮೂಲೆಗುಂಪು ಮಾಡಲು ಜಿಲ್ಲೆಯ ಬಿಜೆಪಿ ನಾಯಕರೆ ಮುಂದಾಗಿದ್ದಾರೆ ಅನ್ನೋದು ಸಹ ಚರ್ಚೆಯಲ್ಲಿದೆ. ನನ್ನನ್ನು ಯಾರು ತಡೆಯೋರು ಅಂತಿರೋ ಯತ್ನಾಳ ಓಟಕ್ಕೆ ಬ್ರೇಕ್ ಬೀಳುತ್ತಾ ಕಾದು ನೋಡಬೇಕು.