ವಯನಾಡು: ಕೇರಳದ ವಯನಾಡಿನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ ಕಾಂಗ್ರೆಸ್ ಸಂಸದ ರಾಹುಲ ಗಾಂಧಿ, ಪ್ರಧಾನಿ ವಿರುದ್ಧ ಭರ್ಜರಿ ವಾಗ್ದಾಳಿ ನಡೆಸಿದ್ದಾರೆ. ಮಹಾತ್ಮ ಗಾಂಧಿಯನ್ನ ಕೊಂದ ಗೋಡ್ಸೆ ಹಾಗೂ ಪ್ರಧಾನಿ ಸಿದ್ಧಾಂತ ಒಂದೆಯಾಗಿ ಎಂದು ಗುಡುಗಿದ್ದಾರೆ.
ಗೋಡ್ಸೆ ಹಾಗೂ ಮೋದಿ ನಡುವೆ ಒಂದೇ ಒಂದು ವ್ಯತ್ಯಾಸ ಅಂದ್ರೆ, ನಾನು ಗೋಡ್ಸೆಯನ್ನ ನಂಬುತ್ತೇನೆ ಎಂದು ಹೇಳುವ ಧೈರ್ಯ ಪ್ರಧಾನಿಗಿಲ್ಲವೆಂದು ಕುಟುಕಿದ್ದಾರೆ. ನಾವು ಭಾರತೀಯರು ಅಲ್ಲವೆಂದು ಹೇಳಲು ಮೋದಿ ಯಾರು? ಅವರಿಗೆ ಆ ಅಧಿಕಾರ ಕೊಟ್ಟವರು ಯಾರು ಎಂದು ರಾಹುಲ ಪ್ರಶ್ನಿಸಿದ್ದಾರೆ. ಅಲ್ದೇ, ನಾನು ಭಾರತೀಯನೆಂದು ನನ್ಗೆ ಗೊತ್ತು. ಅದನ್ನ ಸಾಬೀತು ಪಡಿಸಬೇಕಾಗಿಲ್ಲವೆಂದು ವಾಗ್ದಾಳಿ ನಡೆಸಿದ್ರು.
ದೇಶದಲ್ಲಿ ಆರ್ಥಿಕತೆ, ನಿರುದ್ಯೋಗ ಸಮಸ್ಯೆಯಿದೆ. ಸಿಎಎ, ಎನ್ಆರ್ ಸಿಯಿಂದ ದೇಶದ ಜನರ ಗಮನವನ್ನ ಬೇರೆ ಕಡೆ ಸೆಳೆಯಲಾಗ್ತಿದೆ. ಇದ್ರಿಂದ ದೇಶದ ಜನರಿಗೆ ಉದ್ಯೋಗ ಸಿಗುವುದಿಲ್ಲ. ಅಸ್ಸಾಂ ಹಾಗೂ ಕಾಶ್ಮೀರ ಸುಟ್ಟು ಹಾಕುವುದ್ರಿಂದ ಉದ್ಯೋಗ ಸಿಗುವುದಿಲ್ಲವೆಂದು ಪ್ರಧಾನಿ ಮೋದಿ ವಿರುದ್ಧ ಭರ್ಜರಿಯಾಗಿ ಮಾತಿನ ಬಾಣ ಬಿಟ್ಟಿದ್ದಾರೆ.