ಬೆಂಗಳೂರು: ಬಳ್ಳಾರಿಯಲ್ಲಿ ಸೋಮವಾರ ನಡೆದ ಕಾರ್ ಅಪಘಾತಕ್ಕೆ ಸಂಬಂಧಿಸಿದಂತೆ ಮಾತ್ನಾಡಿರುವ ಕಂದಾಯ ಸಚಿವ ಆರ್.ಅಶೋಕ, ಅಪಘಾತವಾದ ಕಾರಿಗೂ ನಮಗೂ ಸಂಬಂಧವಿಲ್ಲ ಅಂತಾ ಹೇಳಿದ್ದಾರೆ. ಅಲ್ದೇ, ಕಾರನ್ನೂ ನನ್ನ ಮಗ ಓಡಿಸಿಲ್ಲವೆಂದು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಸೋಮವಾರ ನಡೆದ ಕಾರ್ ಅಪಘಾತದಲ್ಲಿ ಇಬ್ಬರು ಪಾದಚಾರಿಗಳು ಸಾವನ್ನಪ್ಪಿದ್ದಾರೆ. ಅಪಘಾತವಾದ ಕಾರು ಕಂದಾಯ ಸಚಿವ ಆರ್.ಅಶೋಕ ಅವರ ಪುತ್ರ ಶರತಗೆ ಸೇರಿದ್ದು. ಕಾರನ್ನ ಅವರೆ ಓಡಿಸ್ತಿದ್ರು ಅನ್ನೋ ವರದಿಯಾಗಿದೆ. ಈ ಸಂಬಂಧ ಮಾತ್ನಾಡಿದ ಸಚಿವರು, ಘಟನೆ ನಿಜಕ್ಕೂ ಬೇಸರ ತರಿಸಿದೆ. ಆದ್ರೆ, ಅಪಘಾತದ ಕಾರಿಗೂ ತಮಗೂ ಸಂಬಂಧವಿಲ್ಲವೆಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಸತ್ಯಾಂಶ ಹೊರ ಬರುತ್ತೆ. ಕಾನೂನು ಎಲ್ಲರಿಗೂ ಒಂದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಅಂತಾ ಹೇಳಿದ್ದಾರೆ.
ಘಟನೆ ಹಿನ್ನೆಲೆ:
KA 05 MW 0357 ನಂಬರಿನ ಮರ್ಸಿಡಿಸ್ ಬೆಂಜ್ ಕಾರ್ ನಲ್ಲಿದ್ದ ಐವರು, ಹಂಪಿ ಸುತ್ತಮುತ್ತ ಎಂಜಾಯ್ ಮಾಡಿ, ಸೋಮವಾರ ಬೆಳಗ್ಗೆ ಬೆಂಗಳೂರು ಕಡೆ ಪ್ರಯಾಣ ಬೆಳಸಿದ್ದಾರೆ. ಕಾರ್ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಮಾರ್ಗವಾಗಿ ಬರುವಾಗ ಅಪಘಾತ ಸಂಭವಿಸಿದೆ. ಈ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ. ಈ ಕಾರಿನಲ್ಲಿ ಸಚಿವ ಆರ್.ಅಶೋಕ ಪುತ್ರ ಶರತ ಸಹ ಇದ್ದು, ಅವರ ತಲೆಗೂ ಗಾಯವಾಗಿದ್ದು, ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗ್ತಿದೆ.
ಘಟನೆ ಸಂಬಂಧ ಎಫ್ಐಆರ್ ಆಗಿದ್ದು, ಅದರಲ್ಲಿ ಕಾರು ಚಾಲಕನ ಹೆಸರು ರಾಹುಲ ಎಂದು ಬರೆಯಲಾಗಿದೆ. ಅಪಘಾತವಾದ ಕಾರು ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿದೆ. ಕಾರ್ ಆರ್.ಅಶೋಕ ಅವರಿಗೆ ಸೇರಿದ್ದು ಎನ್ನಲಾಗ್ತಿದ್ದು, ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.