ಬೆಂಗಳೂರು: ಡಾ.ಸರೋಜಿನಿ ಮಹಿಷಿ ವರದಿಯಂತೆ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಇಂದು ಬಂದ್ ಗೆ ಕರೆ ನೀಡಿವೆ. ಇದಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್ ಯಡಿಯೂರಪ್ಪನವರನ್ನ ಭೇಟಿ ಮಾಡಿದ ಮುಖಂಡರು, ಬಜೆಟ್ ನಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಘೋಷಣೆ ಮಾಡಿಬೇಕು. ಇಲ್ಲದೆ ಹೋದ್ರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಭರವಸೆ ನೀಡದೆ ಹೋದ ಸಿಎಂ:
ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ ನೇತೃತ್ವದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪನವರನ್ನ ಭೇಟಿಯಾದ್ರು. ಈ ವೇಳೆ ಮಾತ್ನಾಡಿದ ಅವರು, ಈ ಹಿಂದಿನ ಸರ್ಕಾರಗಳು ಬರೀ ಆಶ್ವಾಸನೆ ನೀಡಿವೆ. ಪ್ರಮಾಣಿಕವಾಗಿ ವರದಿಯನ್ನ ಅನುಷ್ಠಾನಕ್ಕೆ ತರಲು ಪ್ರಯತ್ನಿಸಿಲ್ಲ. ನೀವಾದ್ರೂ ವರದಿಯನ್ನ ಜಾರಿಗೆ ತರಬೇಕು ಅಂತಾ ಮನವಿ ಮಾಡಿದ್ರು. ವರದಿ ಅನುಷ್ಠಾನದ ಯಾವುದೇ ಭರವಸೆ ನೀಡದೆ ಮನವಿ ಸ್ವೀಕರಿಸಿ ಸಿಎಂ ಹೊರಟು ಹೋದ್ರು.
ಡಾ.ಸರೋಜಿನಿ ಮಹಿಷಿ ವರದಿ ಬಗ್ಗೆಯೇ ಗೊತ್ತಿಲ್ಲದ ಮುಖಂಡರು:
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಭೇಟಿ ನೀಡಿದ ಕನ್ನಡಪರ ಸಂಘಟನೆಗಳ ಮುಖಂಡರಿಗೆ ಡಾ.ಸರೋಜಿನಿ ಮಹಿಷಿ ವರದಿ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಈ ವರದಿ ರಚಿಸಿದ್ದು ಯಾರು? ಆಗ ಸಿಎಂ ಯಾರಿದ್ರು? ಯಾವಾಗ ಬಂತು? ಏನು ಇದರ ಉದ್ದೇಶ ಅನ್ನೋದೆ ಸರಿಯಾಗಿ ಗೊತ್ತಿಲ್ಲದೆ ಒಬ್ಬೊಬ್ಬರು ಒಂದೊಂದು ರೀತಿ ಹೇಳಿ ಅಪಹಾಸ್ಯಕ್ಕೆ ಗುರಿಯಾದ ಪ್ರಸಂಗ ನಡೆದಿದೆ.