ಯಾದಗಿರಿ: ಈ ಚಿತ್ರದಲ್ಲಿರುವ ಮಗುವಿನ ಮುಖ ನೋಡಿದ್ರೆ ಯಾರಿಗಾದ್ರೂ ಭಯ ಅನಿಸುತ್ತೆ ಅಥವ ಅಯ್ಯೋ ಪಾಪ ಅನಿಸುತ್ತೆ. ಹುಟ್ಟುವಾಗಲೇ ಸಾವಿನ ಜೊತೆ ಹೋರಾಡಿದ ಮಗು, ಇದೀಗ ಆರೋಗ್ಯದಿಂದ ಕೂಡಿದೆ. ಕೇವಲ 16 ದಿನದ ಮಗು ತಾಯಿಯ ಮಡಿಲಲ್ಲಿ ಕೈ ಕಾಲು ಬಡೆದುಕೊಂಡು ನಗ್ತಿದೆ.
ತಾಲೂಕಿನ ಅಳಗೇರಾ ಗ್ರಾಮದ ರೇಣುಕಮ್ಮ ಅನ್ನೋ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಗ್ರಾಮೀಣ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ಹೆರಿಗೆ ಮಾಡಲು ಆಗಿಲ್ಲ. ಬಳಿಕ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಬರಲಾಗಿದೆ. ಆಗ ತಾಯಿ ಮತ್ತು ಮಗುವಿನ ಸ್ಥಿತಿ ತುಂಬಾ ಗಂಭೀರವಾಗಿತ್ತು. ಮೊದಲು ತಲೆಭಾಗ ಬಂದು ಅರ್ಧಕ್ಕೆ ನಿಂತು ಬಿಟ್ಟಿದೆ.
ಮಗುವಿನ ಕುತ್ತಿಗೆಗೆ ಕರುಳುಬಳ್ಳಿ ಸಂಪೂರ್ಣ ಬಿಗಿಯಾಗಿ ಸುತ್ತಿಕೊಂಡಿದೆ. ಅದಕ್ಕೆ ಉಸಿರಾಡಲು ಸಹ ಆಗದಷ್ಟು. ಅಂತಹ ಸ್ಥಿತಿಯಲ್ಲಿ ಡಾ.ಶಶಿಕಾಂತ ವಾಲಿ ನೇತೃತ್ವದ ಟೀಂ, ಡಾ.ನಾರಾಯಣಪ್ಪ ಹಾಗು ಡಾ.ರಾಯಚೂರ್ಕರ್ ಅವರ ಮಾರ್ಗದರ್ಶನದಲ್ಲಿ ಚಿಕಿತ್ಸೆ ನೀಡಿ ಯಶಸ್ವಿಯಾಗಿದ್ದಾರೆ.
ಬಾಯಿ ಎಲ್ಲಿದೆ ಅನ್ನೋದು ಸಹ ಕಾಣದಂತ ಸ್ಥಿತಿಯಲ್ಲಿದ್ದ ಮಗುವಿಗೆ, ಮೂರು ದಿನಗಳ ಕಾಲ ಸತತವಾಗಿ ನೆಬಿಲೈಜೇಷನ್ ಚಿಕಿತ್ಸೆ ನೀಡುವ ಮೂಲಕ ಶಾಸ್ವಕೋಶದಲ್ಲಿ ಉದಿಕೊಂಡಿದ್ದ ಬಾವನ್ನ ಕಡಿಮೆ ಮಾಡಲಾಗಿದೆ. ಹಂತ ಹಂತವಾಗಿ ಆ್ಯಂಟಿಬಾಟಿಕ್ ನೀಡಲಾಗಿದೆ. ತಾಯಿಯ ಎದೆಹಾಲು ಕುಡಿಯಲು ಸಹ ಆ ಮಗುವಿಗೆ ಆಗ್ತಿರ್ಲಿಲ್ಲ. ಇಲ್ಲಿನ ವೈದ್ಯರ ಕಠಿಣ ಪರಿಶ್ರಮ ಮತ್ತು ಕಾಳಜಿಯಿಂದ ಇದೀಗ ತಾಯಿ ಮತ್ತು ಹೆಣ್ಣು ಮಗು ಆರೋಗ್ಯದಿಂದ ಇದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಕೊಲಂಬಿಯಾ ಏಷ್ಯಾ ಹಾಗೂ ಅಪೋಲೋ ಆಸ್ಪತ್ರೆಯಲ್ಲಿ 6 ವರ್ಷ ಕಾರ್ಯನಿರ್ವಹಿಸಿದ ಡಾ.ಶಶಿಕಾಂತ ವಾಲಿ ಅವರು, ಯಾದಗಿರಿ ಜಿಲ್ಲಾಸ್ಪತ್ರೆಗೆ ಬಂದು ಇಂದಿಗೆ ಒಂದು ತಿಂಗಳಾಗಿದೆ. ಅಷ್ಟರೊಳಗೆ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನ ಉಳಿಸುವ ಮೂಲಕ ಎಲ್ಲರ ಮೆಚ್ಚುಗೆ ಕಾರಣರಾಗಿದ್ದಾರೆ.