ಪ್ರಜಾಸ್ತ್ರ ಸುದ್ದಿ
ಮೈಸೂರು: ಸಂಸದ ಪ್ರತಾಪ್ ಸಿಂಹಗೆ ರಾಮ ಭಕ್ತರು ಘೇರಾವ್ ಹಾಕಿದ ಘಟನೆ ಸೋಮವಾರ ನಡೆದಿದೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿದೆ. ಅಲ್ಲಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡಿರುವ ರಾಮನ ಮೂರ್ತಿ ನಿರ್ಮಾಣಗೊಂಡಿರುವುದು, ಇಲ್ಲಿನ ದಲಿತ ವ್ಯಕ್ತಿಯ ಹೊಲದಲ್ಲಿ ಸಿಕ್ಕ ಕಪ್ಪು ಶಿಲೆಯಿಂದ.
ರಾಮನ ವಿಗ್ರಹ ಕೆತ್ತನೆಗೆ ಕಲ್ಲು ತೆಗೆದ ಸ್ಥಳದಲ್ಲಿ ಹಾರೋಹಳ್ಳಿ ಹಾಗೂ ಗುಜ್ಜೇಗೌಡನಪುರ ಗ್ರಾಮಸ್ಥರು ಪೂಜೆ ಆಯೋಜಿಸಿದ್ದರು. ಇದರಲ್ಲಿ ಪಾಲ್ಗೊಳ್ಳಲು ಬಂದ ಸಂಸದ ಪ್ರತಾಪ್ ಸಿಂಹಗೆ ಗ್ರಾಮಸ್ಥರು ಧಿಕ್ಕಾರ ಕೂಗಿ ಘೇರಾವ್ ಹಾಕಿದ್ದಾರೆ.
ರಾಮದಾಸ ಎನ್ನುವ ವ್ಯಕ್ತಿಯ ಹೊಲದಲ್ಲಿ ಕಪ್ಪು ಶಿಲೆ ಸಿಕ್ಕಿದೆ. ಆ ಶಿಲೆಯಿಂದಲೇ ರಾಮನ ವಿಗ್ರಹ ಕೆತ್ತಲಾಗಿದೆ. ಆದರೆ, ರಾಮದಾಸಗೆ ಅಯೋಧ್ಯೆಗೆ ಆಹ್ವಾನ ನೀಡಿಲ್ಲ. ರಾಮಮೂರ್ತಿ ನಿರ್ಮಾಣಕ್ಕೆ ಶಿಲೆ ನೀಡಿದ ಹೊಲದ ಮಾಲೀಕನಿಗೆ ಆಹ್ವಾನ ನೀಡದೆ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.