ಸಿಂದಗಿ: ಕರೋನಾ ಮಹಾಮಾರಿ ವಿರುದ್ಧ ಆರೋಗ್ಯ, ಪೊಲೀಸ್ ಇಲಾಖೆ ಜೊತೆಗೆ ಪೌರ ಕಾರ್ಮಿಕರು ಸಹ ಸತತ ಕೆಲಸ ಮಾಡ್ತಿದ್ದಾರೆ. ದಿನದ 24 ಗಂಟೆಯೂ ಇವರು ಸೇವೆ ಸಲ್ಲಿಸ್ತಿದ್ದಾರೆ. ಇವರಿಗೆ ಇಡೀ ದೇಶದ ಜನತೆ ಕೃಜ್ಞತೆ ಸಲ್ಲಿಸ್ತಿದ್ದಾರೆ. ಇದರ ಜೊತೆಗೆ ಇವರಿಗೆ ಅನೇಕರು ಒಂದಿಷ್ಟು ನೆರವು ನೀಡ್ತಿದ್ದಾರೆ.
ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಶ್ರೀಸಂಗಮೇಶ್ವರ ವಿದ್ಯಾಲಯ ಹಾಗೂ ರಾಗ ರಂಜಿನಿ ಸಂಗೀತ ಅಕಾಡಮಿ ವತಿಯಿಂದ ಉಚಿತ ಮಜ್ಜಿಗೆ ವಿತರಣೆ ಮಾಡಲಾಗ್ತಿದೆ. ತಾಲೂಕಿನಲ್ಲಿ ಆರೋಗ್ಯ ಸೇವೆ ಸಲ್ಲಿಸ್ತಿರುವ ಸಿಬ್ಬಂದಿ, ಸಾರ್ವಜನಿಕರ ರಕ್ಷಣೆಗೆ ನಿಂತಿರುವ ಪೊಲೀಸ್ ಸಿಬ್ಬಂದಿ, ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಇತರೆ ರೋಗ ಹರಡದಂತೆ ನೋಡಿಕೊಳ್ತಿರುವ ಪೌರ ಕಾರ್ಮಿಕರು ಸೇರಿದಂತ ನಿರ್ಗತಿಕರಿಗೂ ಉಚಿತ ಮಜ್ಜಿಗೆ ನೀಡಲಾಗ್ತಿದೆ.
ಇಂದಿನಿಂದ ಈ ಸೇವೆ ಶುರುವಾಗಿದ್ದು ಒಂದು ವಾರಗಳ ಕಾಲ ನಡೆಯಲಿದೆ. ಓಮಿನಿ ವ್ಯಾನ್ ಮೂಲಕ ಅವರು ಇರುವಲ್ಲಿಗೆ ಹೋಗಿ ಮಜ್ಜಿಗೆ ನೀಡಲಾಗ್ತಿದೆ. ಒಂದೊಂದು ದಿನ ಒಂದೊಂದು ತಂಪು ಪಾನೀಯ ನೀಡಲು ನಿರ್ಧರಿಸಿದ್ದಾರೆ. ಈ ಮೂಲಕ ಸಾರ್ವಜನಿಕರ ಜೀವಕ್ಕಾಗಿ ತಮ್ಮ ವೈಯಕ್ತಿಕ ಬದುಕನ್ನ ಮೀಸಲು ಇಟ್ಟಿರುವ ಬಂಧು ಮಿತ್ರರಿಗೆ ಅಳಿಲು ಸೇವೆ ಸಲ್ಲಿಸಲಾಗ್ತಿದೆ. ಮುಂದಿನ ದಿನಗಳಲ್ಲಿ ಇವರ ಜೊತೆ ಮತ್ತೆ ಯಾರಾದ್ರೂ ಕೈ ಜೋಡಿಸುವವರು ಜೋಡಿಸಬಹುದು. ಆದ್ರೆ, ಈ ನೆಪದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನ ಮರೆಯಬಾರದು. ಇವರ ಒಂದು ವಾರ ಸೇವೆ ಮುಗಿದ್ಮೇಲೆ ಮತ್ತೊಬ್ಬರು ಮುಂದುವರೆಸಿಕೊಂಡು ಹೋಗಬಹುದು.
ಈ ಸಮಾಜಮುಖಿ ಕಾರ್ಯವನ್ನ ರಾಗ ರಂಜಿನಿ ಸಂಗೀತ ಅಕಾಡಮಿಯ ಮುಖ್ಯಸ್ಥರಾದ ಡಾ.ಪ್ರಕಾಶ, ಶ್ರೀಸಂಗಮೇಶ್ವರ ವಿದ್ಯಾಲಯದ ಸಂಚಾಲಕರಾದ ಗುರುನಾಥ ಅರಳಗುಂಡಗಿ ಹಾಗೂ ಅಂಬಾದಾಸ ಮಾಡಿಕೊಂಡು ಹೋಗ್ತಿದ್ದಾರೆ.