ಪ್ರಜಾಸ್ತ್ರ ವಿಶೇಷ ವರದಿ:
ಕರೋನಾ ಅನ್ನೋದು ಇಡೀ ವಿಶ್ವದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದೆ. ಇದ್ರಿಂದಾಗಿ ಎಲ್ಲೆಡೆ ಸಾವು ನೋವುಗಳು ಸಂಭವಿಸ್ತಿವೆ. ಎಲ್ಲವೂ ಸ್ತಬ್ಧವಾಗಿದ್ದು, ಯಾವುದೇ ರೀತಿ ವ್ಯವಹಾರ ನಡೆಯುತ್ತಿಲ್ಲ. ಹೀಗಾಗಿ ಎಲ್ಲೆಡೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಕರ್ನಾಟಕದಲ್ಲಿ ಮಾರ್ಚ್ 31ರ ತನಕ್ಕ ಬಂದ್ ಆದೇಶ ಇರೋದ್ರಿಂದ, ಸಣ್ಣಪುಟ್ಟ ವ್ಯಾಪಾರಿಗಳು, ದಿನದ ದುಡಿಮೆ ಮೇಲೆ ನಂಬಿರುವ ಜನಗಳಿಗೆ ಬಹುದೊಡ್ಡ ಹೊಡೆತ ಬಿದ್ದಿದೆ.
ಇಂಥಾ ತುರ್ತು ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳುವ ಮೂಲಕ ಕರೋನಾವನ್ನ ಮೆಟ್ಟಿ ನಿಲ್ಲಲು ಪ್ರಯತ್ನ ನಡೆಸಿದೆ. ಇದರ ಜೊತೆಗೆ ಈಗಾಗ್ಲೇ ಸಿಎಂ ಬಿ.ಎಸ್ ಯಡಿಯೂರಪ್ಪ 200 ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಪ್ರವಾಹದಿಂದ ತತ್ತರಿಸಿ ಹೋಗಿರುವ ರಾಜ್ಯದಲ್ಲಿ ಆರ್ಥಿಕ ಸಮಸ್ಯೆ ಸಾಕಷ್ಟಿದೆ. ಸರ್ಕಾರದ ಖಜಾನೆಯಲ್ಲಿಯೂ ಹಣದ ಕೊರತೆಯಿದೆ. ಇದರ ನಡುವೆಯೂ ಸಿಎಂ 200 ಕೋಟಿ ರೂಪಾಯಿ ರಿಲೀಸ್ ಮಾಡುವ ಮೂಲಕ ನಾಡಿನ ಜನರ ಬದುಕಿಗೆ ಬೆಂಬಲವಾಗಿ ನಿಂತಿದ್ದಾರೆ.
ನೆರೆಯ ಕೇರಳದಲ್ಲಿಯೂ ಸಿಎಂ ಪಿಣಿರಾಯಿ ವಿಜಯನ್ 20 ಸಾವಿರ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸುವ ಮೂಲಕ, ರಾಜ್ಯದಲ್ಲಿ ಆಗ್ತಿರುವ ಆರ್ಥಿಕ ಬಿಕ್ಕಟ್ಟು ಸರಿ ಮಾಡಲು ನೋಡಿದ್ದಾರೆ. ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಿರುವ ವಸ್ತುಗಳನ್ನ ಸಿಗುವ ರೀತಿಯಲ್ಲಿ ಒಂದಿಷ್ಟು ಕ್ರಮಗಳನ್ನ ತೆಗೆದುಕೊಂಡಿದ್ದಾರೆ. ಹೀಗೆ ಇತರೆ ರಾಜ್ಯಗಳು ಕರೋನಾವನ್ನ ಕಂಟ್ರೋಲ್ ಮಾಡಲು ಆರೋಗ್ಯ ಕಾರ್ಯದ ಜೊತೆಗೆ ಆರ್ಥಿಕ ವ್ಯವಸ್ಥೆ ಕಡೆ ಗಮನ ಹರಿಸಿವೆ. ಆದ್ರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾತ್ರ ಯಾವುದೇ ವಿಶೇಷ ಪ್ಯಾಕೇಜ್ ಹೊರಡಿಸದೆ, ಮಾರ್ಚ್ 22ರಂದು ಜನತಾ ಕರ್ಫ್ಯೂ ಆಚರಿಸಿ, ಸಂಜೆ ಚಪ್ಪಾಳೆ ತಟ್ಟಿ ಅಂತಿದ್ದಾರೆ. ಇದು ತಪ್ಪು ಅಂತಿಲ್ಲ. ಆದ್ರೆ, ಹಳಿ ತಪ್ಪಿರುವ ಆರ್ಥಿಕ ಸ್ಥಿತಿಯನ್ನ ಸರಿದಾರಿಗೆ ತರೋದು ಯಾರು? ಕೇಂದ್ರದ ವಿತ್ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ಆರ್ಥಿಕ ಟಾಸ್ಕ್ ಫೋರ್ಸ್ ರೆಡಿ ಮಾಡಲಾಗ್ತಿದೆ ಎಂದಿದ್ದಾರೆ. ವಿತ್ ಸಚಿವರು ಸಹ ಶೀಘ್ರದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಎಂದಿದ್ದಾರೆ. ಯಾವಾಗ ಅನ್ನೋ ಪ್ರಶ್ನೆ ಮೂಡಿದೆ.
ಪ್ರವಾಹದ ಟೈಂನಲ್ಲಾದ ನಷ್ಟಕ್ಕೆ ಕೇಂದ್ರಿಂದ ಸರಿಯಾದ ಪರಿಹಾರ ಸಿಕ್ಕಿಲ್ಲ. 11,887 ಕೋಟಿ ಕೇಂದ್ರಿಂದ ಬಾಕಿ ಹಣ ಬಂದಿಲ್ಲ. ತೆರಿಗೆ ಪಾಲಿನ ಹಣ ಸೇರಿದಂತೆ ವಿವಿಧ ಅನುದಾನಗಳ ಹಣ ಬಂದಿಲ್ಲ. ಹೀಗೆ ಕೇಂದ್ರದಿಂದ 16 ಸಾವಿರ ಕೋಟಿ ರೂಪಾಯಿ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕು. ಅದ್ಯಾವುದು ಬಂದಿಲ್ಲ. ಬಜೆಟ್ ನಲ್ಲಿ ಸಿಎಂ ಸ್ವತಃ ಇದನ್ನ ಒಪ್ಪಿಕೊಂಡಿದ್ದಾರೆ. ತನ್ನದೆ ಸರ್ಕಾರವಿರುವ ಕರ್ನಾಟಕಕ್ಕೂ ಮೋದಿ ನಯಾ ಪೈಸಾ ಬಿಚ್ಚುತ್ತಿಲ್ಲ. ಇವರು ಹೇಳುವ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿ, ಅದು ರಾಜ್ಯಕ್ಕೆ ತಲುಪಿ, ಅಲ್ಲಿಂದ ಕರೋನಾ ಪೀಡಿತ ಪದೇಶಗಳಲ್ಲಿ ಬಳಕೆಗೆ ಸಿಗುವಷ್ಟರಲ್ಲಿ ಆಗುವ ಅನಾಹುತಗಳಿಗೆ ಯಾರು ಹೊಣೆ?
ರಾಜ್ಯದಲ್ಲಿ 22 ಜನ ಬಿಜೆಪಿ ಸಂಸದರಿದ್ರೂ ಕೇಂದ್ರದಿಂದ ವಿಶೇಷ ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡುವ ತಾಕತ್ತಿಲ್ಲ. ಬಿಎಸ್ವೈ ಸರ್ಕಾರಕ್ಕೆ ಶಕ್ತಿ ತುಂಬುವ ಕೆಲಸ ಮಾಡ್ತಿಲ್ಲ. ಇದರ ಹಿಂದೆ ಹಲವು ಪಾಲಿಟಿಕ್ಸ್ ಕಾರಣಗಳಿವೆ. ಈ ಹೊತ್ತಿನಲ್ಲಿ ಅದನ್ನ ಬಿಟ್ಟು, ಕೇಂದ್ರದ ಮೇಲೆ ಒತ್ತಡ ಹಾಕಿ ರಾಜ್ಯದಲ್ಲಿನ ಆರ್ಥಿಕ ಸಂಕಷ್ಟಕ್ಕೆ ಸಾಥ್ ನೀಡಬೇಕಾಗಿದೆ. ರಾಜ್ಯವನ್ನ ಬಂದ್ ಮಾಡಿ, ಜನತಾ ಕರ್ಫ್ಯೂ ಮಾಡಿ, ಬರೀ ಚಪ್ಪಾಳೆಯಿಂದ ಆರ್ಥಿಕ ಸ್ಥಿತಿ ಸುಧಾರಿಸಲ್ಲ. ಜನರ ಹೊಟ್ಟೆ ತುಂಬಲ್ಲ..