ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕಿನ 3ನೇ ಆತಂಕ ಶುರುವಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಮೊದ್ಲೇ ಹೇಳಿದ್ದಾರೆ. ಇದಕ್ಕೆ ಸರ್ಕಾರ ಎಷ್ಟು ಬದ್ಧವಾಗಿದೆ ಎಂದು ನೋಡದ್ರೆ, 2ನೇ ಅಲೆಯ ಪರಿಸ್ಥಿತಿ ನಮ್ಮ ಕಣ್ಮುಂದೆ ಇದೆ. ಈಗಾಗ್ಲೇ ರಾಜಧಾನಿ ಸೇರಿದಂತೆ ವಿವಿಧ ಜಿಲ್ಲೆಗಳ ಗಡಿಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಜನರು 3ನೇ ಅಲೆಯಲ್ಲಿ ಯಾವೆಲ್ಲ ಸಮಸ್ಯೆ ಎದುರಿಸಬೇಕು? ಎಷ್ಟೊಂದು ಸಾವು ನೋವು ನೋಡಬೇಕು ಎಂದು ಚಿಂತೆಗೆ ಒಳಗಾಗಿದ್ದಾರೆ. ಆದ್ರೆ, ಸರ್ಕಾರ ಮಾತ್ರ ಸಚಿವ ಸಂಪುಟದ ರಾಜಕೀಯದಲ್ಲಿ ಮುಳುಗಿದೆ. ಸಿಎಂ ಆದಿಯಾಗಿ ಸಚಿವ ಆಕಾಂಕ್ಷಿಗಳು ಸಹ ದೆಹಲಿ ಪರೇಡ್ ನಡೆಸುತ್ತಿದ್ದಾರೆ.
ಒಂದ್ಕಡೆ ಪ್ರವಾಹ, ಮತ್ತೊಂದ್ಕಡೆ ಕರೋನಾ 3ನೇ ಅಲೆಯ ಭಯದ ನಡುವೆ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಉಳಿದುಕೊಂಡು ಜನರ ಸುರಕ್ಷತೆ ಬಗ್ಗೆ ವಿಚಾರಿಸುತ್ತಿಲ್ಲ. ಮುಂಬರುವ ಕರೋನಾ 3ನೇ ಅಲೆಗೆ ಹೇಗೆಲ್ಲ ತಯಾರಾಗಬೇಕು. ಜನರಿಗೆ ಹಿಂದೆ ಅನುಭವಿಸಿದ ಕಷ್ಟ ನೀಡದಂತೆ ಹೇಗೆ ವ್ಯವಸ್ಥೆ ಮಾಡಬೇಕು ಅನ್ನೋ ಚಿಂತೆಯಿಲ್ಲದೆ ಮಂತ್ರಿಗಿರಿಗಾಗಿ ಓಡಾಡುತ್ತಿದ್ದಾರೆ ಎಂದು ಜನರು ಕಿಡಿ ಕಾರುತ್ತಿದ್ದಾರೆ. ಮತ್ತೊಂದ್ಕಡೆ ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಸಹ ತಂತಮ್ಮ ಕ್ಷೇತ್ರಗಳಲ್ಲಿ 3ನೇ ಅಲೆಯಿಂದ ಜನರನ್ನ ಹೇಗೆ ಕಾಪಾಡಬೇಕು ಅನ್ನೋ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಪಕ್ಷ ಸಂಘಟನೆ ಕೆಲಸದಲ್ಲಿಯೇ ತೊಡಗಿಕೊಂಡಿದ್ದಾರೆ ಅನ್ನೋ ಆರೋಪ ಸಹ ಕೇಳಿ ಬಂದಿದೆ.