ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶುಕ್ರವಾರ ನಸುಕಿನ ಜಾವ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಸಜೀವ ದಹನವಾದ ದುರಂತ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮುತ್ತಯ್ಯಸ್ವಾಮಿ(45) ಮೃತ ದುರ್ದೈವಿ.
ರಾತ್ರಿ ಕೆಲಸ ಮುಗಿಸಿ ಲಿಂಗಧೀರನಹಳ್ಳಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕ ಬಸ್ಸಿನಲ್ಲಿಯೇ ಮಲಗಿಕೊಂಡಿದ್ದಾರೆ. ನಸುಕಿನಜಾವ ಸುಮಾರು 4.45ರ ಸಮಯದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಈ ಘಟನೆಗೂ ಮೊದಲು ಡ್ರೈವರ್ ಪ್ರಕಾಶ್ ಶೌಚಾಲಯಕ್ಕೆ ಹೋಗಿದ್ದರಿಂದ ಆತ ಪಾರಾಗಿದ್ದಾನೆ. ಆದರೆ, ಬಸ್ಸಿನಲ್ಲಿ ಮಲಗಿದ್ದ ನಿರ್ವಾಹಕ ಪ್ರಾಣ ಕಳೆದುಕೊಂಡಿದ್ದಾನೆ.
ಬಸ್ಸಿಗೆ ಬೆಂಕಿ ಹತ್ತಿರುವುದನ್ನು ಗಮನಿಸಿ ಬೀಟ್ ಪೊಲೀಸರು ನಂದಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಅದು ಸಾಧ್ಯವಾಗಿಲ್ಲ. ಅಲ್ಲದೆ ಕಂಡಕ್ಟರ್ ನನ್ನು ಉಳಿಸಲು ಸಾಧ್ಯವಾಗಿಲ್ಲ. ಬಿಎಂಟಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಮುತ್ತಯ್ಯಸ್ವಾಮಿ ಮೂಲತಃ ಬಳ್ಳಾರಿಯವನಾಗಿದ್ದಾನೆ.