ಪ್ರಜಾಸ್ತ್ರ ಅಪರಾಧ ಸುದ್ದಿ
ಉಡುಪಿ: ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿರುವ ಹೊತ್ತಿನಲ್ಲಿ ಮನೆಗೆ ಬಂದು ನುಗ್ಗಿದ ಹಂತಕನೊಬ್ಬ 4 ಜನರ ಪ್ರಾಣ ತೆಗೆದ ಘಟನೆ ಉಡುಪಿಯಲ್ಲಿ ಭಾನುವಾರ ನಡೆಯಿತು. ಹೀಗೆ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಹಂತಕನ ಬಂಧನಕ್ಕಾಗಿ 5 ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ತಂಡಗಳ ನಿರ್ವಹಣೆಯನ್ನು ಡಿವೈಎಸ್ಪಿ ಹಂತದ ಅಧಿಕಾರಿಗಳು ನಡೆಸಲಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆ ಕಾರಣಕ್ಕೆ ಈ ಹತ್ಯೆ ನಡೆದಿದೆ ಎನ್ನುವುದರ ತನಿಖೆ ನಡೆಯುತ್ತಿದೆ.
ಹಸೀನಾ(46), ಅಫ್ನಾನ್(23), ಅಯ್ನಾಜ್(21) ಹಾಗೂ ಅಸೀಮ್(12) ಕೊಲೆಯಾದ ದುರ್ದೈವಿಗಳು. ಮುಸುಕುಧಾರಿಯಾಗಿ ಬಂದ ಹಂತಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ನೆರೆಹೊರೆಯುವರು ಸಹಾಯಕ್ಕೆ ಕಿರುಚಿದಾಗ ಅವರಿಗೆ ಹೆದರಿಸಿ ಓಡಿಸಿದ್ದಾನೆ. ಮನೆಯಲ್ಲಿ ಯಾವುದೇ ರೀತಿಯ ಕಳ್ಳತನವಾಗಿಲ್ಲ. ಹೀಗಾಗಿ ಕೊಲೆಯ ಹಿಂದಿನ ರಹಸ್ಯವೇನು ಎನ್ನುವುದು ಪತ್ತೆಯಾಗಬೇಕಿದೆ.