ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ನೀಡಿರುವ ಹೇಳಿಕೆಯಿಂದ ಹಾಲಿ ಸಚಿವರಿಗೆ ಟೆನ್ಷನ್ ಶುರುವಾಗಿದೆ. ಶೀಘದ್ರದಲ್ಲಿಯೇ ಸಂಪುಟ ಪುನರ್ ರಚನೆ ಮಾಡಲಾಗುತ್ತೆ ಎಂದು ಕಟೀಲ ಹೇಳಿದ್ದು, ಇದ್ರಿಂದ ಹಾಲಿ ಸಚಿವರಿಗೆ ನಡುಕ ಶುರುವಾಗಿದೆ.
ಸಚಿವ ಸ್ಥಾನ ವಂಚಿತ ಮೂಲ ಬಿಜೆಪಿಗರನ್ನ ತಣ್ಣಾಗಿಸಲು ಉಳಿದಿರುವ ಸಚಿವ ಸ್ಥಾನಗಳನ್ನ ಸೇರಿದಂತೆ 6 ರಿಂದ 8 ಸಚಿವರಿಗೆ ಗೇಟ್ ಪಾಸ್ ಕೊಡುವ ಮೂಲಕ ಸಂಪುಟ ಪುನರ್ ರಚನೆ ಮಾಡಲಾಗುವುದು ಅಂತಾ ಹೇಳಿದ್ದಾರೆ. ರಾಜ್ಯಾಧ್ಯಕ್ಷರೇ ಈ ಮಾತುಗಳನ್ನ ಹೇಳಿರುವುದ್ರಿಂದ ಮೂಲ ಬಿಜೆಪಿ ಸಚಿವರಲ್ಲಿ ಟೆನ್ಷನ್ ಮನೆ ಮಾಡಿದೆ. ಯಾರು ಆ 6 ರಿಂದ 8 ಜನ ಸಚಿವರು, ಯಾರನ್ನ ಕೈ ಬಿಡಲಾಗುತ್ತೆ ಅನ್ನೋ ಕುತೂಹಲ ಮೂಡಿದೆ.
ಕಳೆದ ವಾರ ದೆಹಲಿಗೆ ಭೇಟಿ ನೀಡಿದ್ದ ಸಿಎಂ ಬಿ.ಎಸ್ ಯಡಿಯೂರಪ್ಪ, ನೂತನ ಸಚಿವರ ಪದಗ್ರಹಣದ ಜೊತೆಗೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ರು. ಇದಕ್ಕೆ ದೆಹಲಿ ನಾಯಕರು ಉತ್ತಮವಾಗಿ ಸ್ಪಂದಿಸಿದ್ದು, ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಹೀಗಾಗಿ ಬಜೆಟ್ ಪೂರ್ವದಲ್ಲಿಯೇ ಈ ಕೆಲಸವಾದ್ರೆ 6 ರಿಂದ 8 ಸಚಿವರಿಗೆ ಕೊಕ್ ಕೊಡಲಾಗುತ್ತೆ.
ಕೋಟಾ ಶ್ರೀನಿವಾಸ ಪೂಜಾರಿ, ಸಿ.ಸಿ ಪಾಟೀಲ, ಶಶಿಕಲಾ ಜೊಲ್ಲೆ, ಎಚ್.ನಾಗೇಶ, ಪ್ರಭು ಚವ್ಹಾಣ ಸೇರಿದಂತೆ ಪ್ರಮುಖರನ್ನ ಸಚಿವ ಸಂಪುಟದಿಂದ ಕೈಬಿಡಲು ಸಿಎಂ ಮುಂದಾಗಿದ್ದಾರೆ ಅಂತಾ ಹೇಳಲಾಗ್ತಿದೆ. ಆದ್ರೆ, ಇನ್ನು ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.