ಪ್ರಜಾಸ್ತ್ರ ಡೆಸ್ಕ್
ಬೆಂಗಳೂರು: ರಾಜ್ಯದಲ್ಲಿ ಇದೀಗ ಹಿಂದು ದೇವಸ್ಥಾನಗಳ ಜಾತ್ರೆಯ ಸಂದರ್ಭದಲ್ಲಿ ಹಿಂದುಯೇತರರು ಅಂಗಡಿಗಳನ್ನು ಹಾಕಬಾರದು ಎಂದು, ಹಿಂದುಪರ ಸಂಘಟನೆಗಳು ಆಗ್ರಹಿಸಿವೆ. ಇಂತಹ ಘಟನೆಗೆ ಮತ್ತೆ ದಕ್ಷಿಣ ಕನ್ನಡ, ಉಡುಪಿ ವೇದಿಕೆ ನಿರ್ಮಿಸಿವೆ.
ಧಾರ್ಮಿಕ ದತ್ತಿ ಇಲಾಖೆಗೆ 2002ರಲ್ಲಿ ಕಾನೂನು ತರಲಾಗಿದೆ. ಅದರಲ್ಲಿನ ಸೆಕ್ಷನ್ 4.5 ಪ್ರಕಾರ ಹಿಂದು ಧಾರ್ಮಿಕ ಸಂಸ್ಥೆಗಳ ಹತ್ತಿರ ಹಿಂದುಯೇತರರಿಗೆ ಅಂಗಡಿ, ಮಳಿಗೆ ತೆರೆಯಲು ಅವಕಾಶವಿಲ್ಲವೆಂದು ಸೂಚಿಸಿದೆ. ಕಾಂಗ್ರೆಸ್ ಸರ್ಕಾರ ಇರುವಾಗಲೇ ಇದನ್ನು ತರಲಾಗಿದೆ. ಅದನ್ನು ಇದೀಗ ಪಾಲಿಸಲಾಗುತ್ತಿದೆ ಎಂದು ಬಿಜೆಪಿಯ ಸಚಿವರು, ಶಾಸಕರು ಹೇಳುವ ಮೂಲಕ ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸಾಕಷ್ಟು ಬಾರಿ ಸಾಕಷ್ಟು ಕಾನೂನುಗಳು ಆಗಾಗ ತಿದ್ದುಪಡಿ ಆಗುತ್ತಲೇ ಇವೆ. ಅದರಲ್ಲಿ ಒಂದಿಷ್ಟು ಮಾರ್ಪಾಡು ಮಾಡಿಕೊಳ್ಳುತ್ತಲೇ ಬರಲಾಗುತ್ತಿದೆ. ಕಾಂಗ್ರೆಸ್ ಮಾಡಿರುವ ತಪ್ಪನ್ನು ಬಿಜೆಪಿ ಸರಿಪಡಿಸಿ ಹೊಸತನಕ್ಕೆ ನಾಂದಿ ಹಾಡಬಹುದಲ್ವಾ. ರಾಜ್ಯದಲ್ಲಿ ಕೋಮುಸೌಹಾರ್ದತೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಹಿಂದೆ ಆಗಿರುವ ತಪ್ಪು ಸರಿಪಡಿಸುವ ಮೂಲಕ ಬಿಜೆಪಿ ಸರ್ಕಾರ ಧರ್ಮ ಸಹಿಷ್ಣತೆಗೆ ಬೆಲೆ ಕೊಡುತ್ತೆ. ಅದನ್ನು ಬೆಂಬಲಿಸುತ್ತೆ ಅನ್ನೋ ಸಂದೇಶ ಸಾರಬಹುದಲ್ವಾ. ಕಾಂಗ್ರೆಸ್ ತಂದ ಕಾನೂನು ಎಂದು ಹೇಳುತ್ತಾ ಸಮಾಜ ಒಡೆಯುವುದನ್ನು ಬಿಡಬೇಕಿದೆ. ಕಾಂಗ್ರೆಸ್ ತಂದ ಕಾನೂನಿಗೆ ತಿದ್ದುಪಡಿ ತರುವ ಮೂಲಕ ತಕ್ಕ ಉತ್ತರ ನೀಡುವ ಕೆಲಸ ಬಿಜೆಪಿ ಮಾಡಬೇಕಿದೆ.