ಪ್ರಜಾಸ್ತ್ರ ಸುದ್ದಿ
ಸಿಂದಗಿ: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ರೀತಿಯಲ್ಲಿರುವ ಬಾವುಟಗಳನ್ನು ಮಾರಾಟ ಮಾಡುತ್ತಿರುವುದನ್ನು ಖಂಡಿಸಿ, ಪಟ್ಟಣದಲ್ಲಿ ಸಮಾನ ಮನಸ್ಕ ಗೆಳೆಯರ ಬಳಗದಿಂದ ಪ್ರತಿಭಟನೆ ನಡೆಸಲಾಯಿತು. ತಾಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಸಂಗಮೇಶ ಡಿಗ್ಗಿ, ರಾಷ್ಟ್ರಧ್ವಜದ ನಿಯಮಾವಳಿ ಪ್ರಕಾರ ಬಾವುಟ ತಯಾರಿಸದೆ, ಬೇಕಾಬಿಟ್ಟಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇಂತವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದರು.
ಹರಿದು ಹೋದ, ತ್ರಿವರ್ಣಗಳ ಅಳತೆ, ಬಟ್ಟೆಯ ಅಳತೆ, ಸರಿಯಾಗಿ ಹೊಲೆಯದೆ, ಮಧ್ಯದಲ್ಲಿರುವ ಅಶೋಕ ಚಕ್ರದ ಚಿತ್ರವನ್ನು ಬೇಕಾಬಿಟ್ಟಿಯಾಗಿ ಮುದ್ರಿಸಲಾ ಗಿದೆ. ಇದನ್ನು ಪರಿಶೀಲನೆ ಮಾಡದೆ ಮಾರಾಟ ಮಾಡುತ್ತಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ರಾಷ್ಟ್ರಧ್ವಜ ಕಾಯ್ದೆಗೆ ತಿದ್ದುಪಡಿ ತಂದು ಖಾದಿ ಗ್ರಾಮೋದ್ಯೋಗಕ್ಕೆ ಹೊಡೆತ ಕೊಟ್ಟಿದೆ. ಇದನ್ನು ನಂಬಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಜನರ ಅನ್ನವನ್ನು ಕಸಿಯಲಾಗಿದೆ. ತಿದ್ದುಪಡಿ ಮಾಡಿರುವ ಕಾಯ್ದೆಯನ್ನು ವಾಪಸ್ ಪಡೆದು, ಖಾದಿ ಬಟ್ಟೆಯಿಂದಲೇ ಧ್ವಜ ತಯಾರಿಸಬೇಕು ಅನ್ನೋ ನಿಯಮವನ್ನು ಮುಂದುವರೆಸಬೇಕೆಂದು ಹೇಳಿ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಆನಂದ ಕುಲಕರ್ಣಿ, ಮಹಾಂತೇಶ ವಡಗೇರಿ, ಶಿವನಗೌಡ ಪಾಟೀಲ, ವಿದ್ಯಾಧರ ಟಕ್ಕಳಕಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.