ಬೆಳಗಾವಿ: ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಸೂರ್ಯನಾರಾಯಣ ಹಗೇದ ಅನ್ನೋ 21 ವರ್ಷದ ಯುವಕ ಸಬ್ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾನೆ.
ವಿಜಯಪುರದ ಸೈನಿಕ್ ಶಾಲೆಯಲ್ಲಿ ಶೇಕಡ 93ರಷ್ಟು ಅಂಕಗಳನ್ನ ಪಡೆದು ದ್ವಿತೀಯ ಪಿಯುಸಿ ತೇರ್ಗಡೆಯಾಗಿದ್ದ. ನಂತರ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಪ್ರತಿಭಾ ಪರೀಕ್ಷೆಯಲ್ಲಿ 392ನೇ ರ್ಯಾಂಕ್ ಪಡೆದಿದ್ದ. ಪುಣೆಯ ನ್ಯಾಷನ್ನಲ್ ಡಿಫೆನ್ಸ್ ಅಕಾಡೆಮಿಯಲ್ಲಿ 3 ವರ್ಷ ಮತ್ತು ಡೆಹರಾಡೂನ್ ನ ನ್ಯಾಷನಲ್ ಮಿಲಿಟರಿ ಅಕಾಡೆಮಿಯಲ್ಲಿ 1 ವರ್ಷ ನಿಗದಿಪಡಿಸಿದ ಅವಧಿಯಲ್ಲಿ ತರಬೇತಿ ಮುಗಿಸಿ ಸಬ್ ಲೆಫ್ಟಿನಂಟ್ ಹುದ್ದೆಗೆ ಆಯ್ಕೆಯಾಗಿದ್ದಾನೆ.
ಇದೀಗ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಮತ್ತು ಜನರಲ್ ವಿ.ಕೆ. ಸಿಂಗ್ ಕಾರ್ಯನಿರ್ವಹಿಸಿದ್ದ ರಜಪೂತ ರೆಜಿಮೆಂಟಿನಲ್ಲಿ ಕತ್ಯವ್ಯಕ್ಕೆ ಹಾಜರಾಗಿರುವ ಸೂರ್ಯನಾರಾಯಣ, ಕೇವಲ 21 ವಯಸ್ಸು 5 ತಿಂಗಳನವನಾಗಿದ್ದು, ಕಿರಿಯ ವಯಸ್ಸಿನಲ್ಲಿ ಸಬ್ ಲೆಫ್ಟಿನಂಟ್ನಂತ ಉನ್ನತ ಹುದ್ದೆಗೆ ಆಯ್ಕೆಯಾಗುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾನೆ.
ತಂದೆ ನಿಂಗಪ್ಪ ಹಗೇದ ಮಾಜಿ ಸೈನಿಕರಾಗಿದ್ದು, ತಾಯಿ ರೇಣುಕಾ ಹಗೇದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿಯಾಗಿದ್ದಾರೆ. ಇವರಿಗೆ ಏಕೈಕ ಪುತ್ರನಾಗಿರುವ ಸೂರ್ಯನಾರಾಯಣನನ್ನ ದೇಶ ಸೇವೆಗಾಗಿ ಸೇನೆಗೆ ಕಳಿಸುವ ಮೂಲಕ ದೇಶಾಭಿಮಾನವನ್ನ ಮೆರೆದಿದ್ದಾರೆ.