ಪ್ರಜಾಸ್ತ್ರ ಸುದ್ದಿ
ಸಿಂದಗಿ: ನೂತನ ತಾಲೂಕಾದ ಆಲಮೇಲಕ್ಕೆ ಸೇರ್ಪಡೆಗೊಂಡಿರುವ ಕೆರೂರು ಗ್ರಾಮವನ್ನು ಸಿಂದಗಿಗೆ ಮರು ಸೇರ್ಪಡೆಯಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೆರೂರು, ಗುತ್ತರಗಿ, ಬಂಟನೂರ ಗ್ರಾಮಗಳು ಮೊದಲು ಸಿಂದಗಿ ತಾಲೂಕಿನಲ್ಲಿದ್ದವು. ತಾಲೂಕು ವಿಂಗಡಣೆ ಬಳಿಕ ಆಲಮೇಲಕ್ಕೆ ಸೇರ್ಪಡೆಯಾಗಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಕೆರೂರು ಗ್ರಾಮ ಸಿಂದಗಿಯಿಂದ 18 ಕಿಲೋ ಮೀಟರ್ ಅಂತರದಲ್ಲಿದ್ದರೆ ಆಲಮೇಲಗೆ 38 ಕಿಲೋ ಮೀಟರ್ ಅಂತರದಲ್ಲಿದೆ. ಈ ಕುರಿತು ತಹಶೀಲ್ದಾರ್, ಜಿಲ್ಲಾಧಿಕಾರಿ, ಬೆಳಗಾವಿ ಚುನಾವಣಾ ಆಯುಕ್ತರಿಗೂ ಆಕ್ಷೇಪಣಾ ಅರ್ಜಿ ಸಲ್ಲಿಸಲಾಗಿದೆ. ಆದರೆ, ಯಾರೂ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ನಾವು ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತಿದ್ದೇವೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ವೇಳೆ ಸಿದ್ದಲಿಂಗಪ್ಪ ಬಿರಾದಾರ, ಪಿ.ಡಿ ಓಂಕಾರ, ಪಿ.ಜಿ ಪಾಟೀಲ, ಎ.ಎ ಮೊಕಾಶಿ, ಬಸವರಾಜ ಘೋಳಿ, ಶರಣಪ್ಪ, ಸಾಯಬಣ್ಣ ಆರ್.ಮಾದರ, ರವೇಶ ಘೋಳಿ, ಮಾಬುಪಟೇಲ ಮೊಕಾಶಿ, ತಿಪ್ಪಣ್ಣ ಪೂಜಾರಿ, ಎಸ್.ಎಸ್ ಬಿರಾದಾರ ಸೇರಿ ಅನೇಕರು ಉಪಸ್ಥಿತರಿದ್ದರು.