ಪ್ರಜಾಸ್ತ್ರ ಸುದ್ದಿ
ಮಂಡ್ಯ: ರಾಜ್ಯದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಸಿಲಿಕಾನ್ ಸಿಟಿ ಸೇರಿದಂತೆ ಹಲವು ಜಿಲ್ಲೆಗಳ ಜನರು ಕಂಗಾಲಾಗಿದ್ದಾರೆ. ಮಹಿಳೆಯೊಬ್ಬರ ಮೇಲೆ ಚಿರತೆಯೊಂದು ಶನಿವಾರ ಮುಂಜಾನೆ ದಾಳಿ ಮಾಡಿದ ಘಟನೆ ಅವರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಸಮ್ಮಣ್ಣಿ ಅನ್ನೋ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿದೆ.
ಜಾನುವಾರುಗಳನ್ನು ಹೊಲಗಳಿಗೆ ಹೊಡೆದುಕೊಂಡು ಹೊರಟಿದ್ದ ಸಂದರ್ಭದಲ್ಲಿ ಚಿರತೆ ದಾಳಿ ನಡೆಸಿದೆ. ಮಹಿಳೆಗೆ ಮೈ, ಕೈಗೆ ಒಂದಿಷ್ಟು ಗಾಯಗಳಾಗಿವೆ. ಮಹಿಳೆ ಕಿರುಚಾಟ ಕೇಳಿದ ಸುತ್ತಲಿನ ಜನರು ಬಂದಿದ್ದಾರೆ. ಅಷ್ಟರಲಿ ಚಿರತೆ ಪರಾರಿಯಾಗಿದೆ.
ಗಾಯಗೊಂಡ ಮಹಿಳೆಯನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಪದೆಪದೆ ಚಿರತೆ ಕಾಣಿಸಿಕೊಂಡು ದಾಳಿ ಮಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಸಂಬಂಧ ಪಟ್ಟ ಇಲಾಖೆಯವರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.