ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇದೀಗ ದೊಡ್ಡ ವಿವಾದ ಎಬ್ಬಿಸಿರುವುದು ಉರಿಗೌಡ, ನಂಜೇಗೌಡ ಅನ್ನೋ ಹೆಸರು. ಟಿಪ್ಪು ಕೊಂದಿದ್ದು ಇವರೆ ಎಂದು ಬಿಜೆಪಿ ನಾಯಕರು ಪದೆಪದೆ ಹೇಳುತ್ತಿದ್ದು, ಅದಕ್ಕೆ ಅಷ್ಟೇ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆ ನಿರ್ಮಾಪಕ, ಸಚಿವ ಮುನಿರತ್ನ ಸಿನಿಮಾ ಮಾಡಲು ಮುಂದಾಗಿದ್ದರು.
ಉರಿಗೌಡ, ನಂಜೇಗೌಡ ಅನ್ನೋ ಟೈಟಲ್ ಸಹ ರಿಜಿಸ್ಟರ್ ಮಾಡಿಸಿದ್ದರು. ಮುಹೂರ್ತದ ದಿನಾಂಕ ಸಹ ಘೋಷಿಸಿದ್ದರು. ಇದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತೆ ಆಯಿತು. ಈಗ ಒಕ್ಕಲಿಗ ಸಮುದಾಯದ ನಿರ್ಮಲಾನಂದ ಸ್ವಾಮೀಜಿ ಅವರು ಪ್ರವೇಶ ಮಾಡಿದ್ದು, ಸ್ವಾಮೀಜಿ ಭೇಟಿಯ ಬಳಿಕ ಸಚಿವ ಮುನಿರತ್ನ ಯೂ ಟರ್ನ್ ಹೊಡೆದಿದ್ದಾರೆ.
ನಾನು ಉರಿಗೌಡ, ನಂಜೇಗೌಡ ಕುರಿತು ಸಿನಿಮಾ ನಿರ್ಮಾಣ ಮಾಡಲ್ಲ ಎಂದು ಹೇಳುವ ಸಧ್ಯಕ್ಕೆ ವಿವಾದಕ್ಕೆ ತೆರೆ ಎಳೆದಿದ್ದಾರೆ. ಉರಿಗೌಡ, ನಂಜೇಗೌಡ ವಿಚಾರದಲ್ಲಿ ಒಂದಿಷ್ಟು ದಾಖಲೆ ಸಿಗುತ್ತವೆ. ಒಂದಿಷ್ಟು ಸಿಗುವುದಿಲ್ಲ. ಸ್ವಾಮೀಜಿ ಜೊತೆಗೆ ಚರ್ಚೆ ಮಾಡಿದ ಬಳಿಕ ಅನಿಸಿತು. ಯಾರ ಮನಸ್ಸು ನೋಯಿಸಬಾರದು ಎಂದು. ಸಿನಿಮಾ ಮಾಡಲು ಸಾಕಷ್ಟು ಕಥೆಗಳ ಬರುತ್ತವೆ. ಇದನ್ನ ಇಲ್ಲಿಗೆ ಕೈ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ಟಿಪ್ಪು ಕೊಂದಿದ್ದು ಉರಿಗೌಡ, ನಂಜೇಗೌಡ ಅನ್ನೋ ಇತಿಹಾಸವನ್ನು ಸೃಷ್ಟಿಸಿದ ಬಿಜೆಪಿ ನಾಯಕರು ಎರಡು ಸಮುದಾಯಗಳ ನಡುವೆ ಅಶಾಂತಿ ಸೃಷ್ಟಿಸಲು ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಕೆಲ ಸಂಘಟನೆಗಳು ಸಹ ಸಿ.ಟಿ ರವಿ, ಅಶ್ವಥನಾರಾಯಣ, ಮುನಿರತ್ನ ಸೇರಿ ಬಿಜೆಪಿ ವಿರುದ್ಧ ಕಿಡಿ ಕಾರುತ್ತಿವೆ.