ಪ್ರಜಾಸ್ತ್ರ ಅಪರಾಧ ಸುದ್ದಿ
ಸಿಂದಗಿ: ಪಟ್ಟಣದ ಸಂಗಮೇಶ್ವರ ದೇವಸ್ಥಾನದ ಹಿಂಭಾಗದ ಮುಳ್ಳಿನಕಂಟಿಯಲ್ಲಿ ಡಿಸೆಂಬರ್ 11, ಶುಕ್ರವಾರ ಬೆಳಗ್ಗೆ ಶವವೊಂದು ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಸಿಕ್ಕಿ ಮೃತದೇಹ ನೋಡಿದ ಪಟ್ಟಣದ ಜನತೆಯಲ್ಲಿ ಹತ್ತಾರು ಪ್ರಶ್ನೆಗಳು ಮೂಡಿದ್ವು. ಇದು ಆತ್ಮಹತ್ಯೆಯೋ? ಕೊಲೆಯೋ? ಅನ್ನೋ ಪ್ರಶ್ನೆಗಳು ಮೂಡಿದ್ವು. ಅದಕ್ಕೆ ಇದೀಗ ಉತ್ತರ ಸಿಕ್ಕಿದೆ.
ಪಟ್ಟಣದಲ್ಲಿ ಪತ್ತೆಯಾದ ನಿಂಗಪ್ಪ ಗೊಲ್ಲಾಳಪ್ಪ ಯತ್ನಾಳ(46) ಎಂಬಾತನನ್ನ ಯಾರೋ ಮರ್ಡರ್ ಮಾಡಿ ಎಸೆದು ಹೋಗಿರುವುದು ಬಯಲಾಗಿದೆ. ಇದರೊಂದಿಗೆ ಮತ್ತಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಯಾರು ಕೊಲೆ ಮಾಡಿದ್ದು? ಯಾತಕ್ಕಾಗಿ ಮಾಡಿದ್ದು? ಎಲ್ಲಿ ಕೊಲೆ ಮಾಡಲಾಗಿದೆ? ಇಲ್ಲಿ ಶವ ಬಂದಿರುವುದು ಹೇಗೆ? ಅನ್ನೋದು ಸೇರಿದಂತೆ ಹತ್ತಾರು ಪ್ರಶ್ನೆಗಳು ಮೂಡಿವೆ. ಇದರ ತನಿಖೆ ಇದೀಗ ನಡೆಯುತ್ತಿದೆ.
ಇನ್ನು ಡಿಸೆಂಬರ್ 6ರ ರಾತ್ರಿ 9ರಿಂದ ಡಿಸೆಂಬರ್ 11ರ ಮಧ್ಯಾಹ್ನ 12 ಗಂಟೆಯಯ ಮಧ್ಯದ ಸಮಯದಲ್ಲಿ ಯಾರೋ ಕೊಲೆ ಮಾಡಿದ್ದು, ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಎಸೆದು ಹೋಗಿದ್ದಾರೆ ಅನ್ನೋದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಕೊಲೆಯಾದ ವ್ಯಕ್ತಿಯ ಸಂಬಂಧಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.
ಕೊಲೆಯಾದವನು ಯಾರು? ಎಲ್ಲಿಯವನು?
ಹತ್ಯೆಯಾದ ನಿಂಗಪ್ಪ ಗೊಲ್ಲಾಳಪ್ಪ ಯತ್ನಾಳ ಮೂಲತಃ ಯಡ್ರಾಮಿ ತಾಲೂಕಿನ ಮಾಗಣಗೇರಿ ಗ್ರಾಮದವನು. ಈತ ತನ್ನ 2ನೇ ಹೆಂಡ್ತಿ ಹಾಗೂ ಮಕ್ಕಳ ಜೊತೆಗೆ ಹರಿಹರದ ಇಟ್ಟಿಗೆ ಭಟ್ಟಿಯಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ. ಮುಂದೆ ಅದೇನಾಗಿದೆಯೋ ಗೊತ್ತಿಲ್ಲ, ತನ್ಗೆ ದುಡಿಯಲು ಆಗುವುದಿಲ್ಲವೆಂದು ಹೇಳಿ ಡಿಸೆಂಬರ್ 6ರ ರಾತ್ರಿ 9ಗಂಟೆಯ ಸುಮಾರಿಗೆ, ನಮ್ಮೂರಿಗೆ ಹೋಗುವುದಾಗಿ ಹೇಳಿ ಹೆಂಡ್ತಿ, ಮಕ್ಕಳನ್ನ ಬಿಟ್ಟು ಬಂದಿದ್ದಾನೆ.
ಹೀಗೆ ಹೇಳಿ ಹೋದವನು ಸ್ವಗ್ರಾಮಕ್ಕೆ ಬಂದಿರ್ಲಿಲ್ಲ. ಈ ಬಗ್ಗೆ ಗ್ರಾಮದಲ್ಲಿರುವ ಕುಟುಂಬಸ್ಥರಿಗೆ ತಿಳಿದಿರುವುದಿಲ್ಲ. ಇದರ ಮಧ್ಯೆ ಡಿಸೆಂಬರ್ 11, ಶುಕ್ರವಾರ ಬೆಳಗ್ಗೆ 9.30ರ ಸುಮಾರಿನಲ್ಲಿ ಈತನ ಶವ ಸಿಂದಗಿ ಪಟ್ಟಣದಲ್ಲಿ ಪತ್ತೆಯಾಗಿದೆ. ಶವದ ಗುರುತು ಪತ್ತೆಯ ಕಾರ್ಯ ನಡೆದಾಗ, ಯಡ್ರಾಮಿ ತಾಲೂಕಿನ ಮಾಗಣಗೆರೆ ಗ್ರಾಮದವನೆಂದು ತಿಳಿದಿದೆ. ಕೊಲೆಯಾದ ನಿಂಗಪ್ಪನ ದೇಹದ ಹಲವು ಭಾಗಗಳಲ್ಲಿ ಹರಿತವಾದ ಆಯುಧದಿಂದ ಇರಿದ ಗಾಯಗಳು ಕಂಡು ಬಂದಿವೆ. ಕುತ್ತಿಗೆ, ಬೆನ್ನಿನ ಎಡಭಾಗ ಸೇರಿದಂತೆ ದೇಹದ ಹಲವು ಕಡೆ ಇರಿಯಲಾಗಿದೆ. ಇದರ ಆಧಾರದ ಮೇಲೆ ಯಾರೋ ಮರ್ಡರ್ ಮಾಡಿ ಎಸೆದು ಹೋಗಿದ್ದಾರೆ ಎನ್ನಲಾಗ್ತಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಎಲ್ ಅರಸಿದ್ಧಿ(ವಿಜಯಪುರ), ಸಿಪಿಐ ಹೆಚ್. ಎಂ ಪಾಟೀಲ(ಸಿಂದಗಿ), ಮಹಿಳಾ ಪಿಎಸ್ಐ ಎನ್.ಎನ್ ಗುಡ್ಡೋಡ್ಡಗಿ(ಸಿಂದಗಿ) ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಂತಕರ ಪತ್ತೆಗೆ ಬಲೆ ಬೀಸಲಾಗಿದೆ