ಬೆಂಗಳೂರು/ವಿಜಯಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಕೆಲವು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸಿದ್ಧವೆಂದು ಹೇಳಿದ್ದಾರೆ. ನಿನ್ನೆ ಈ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ರು. ಸರ್ಕಾರ ಉಳಿಸಲು ಸಚಿವ ಅಲ್ಲ ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಲು ಸಿದ್ಧವೆಂದಿದ್ರು. ಇಂದು ಮತ್ತಿಬ್ಬರು ಸಚಿವರು ಇದೆ ಮಾತನ್ನ ಹೇಳಿದ್ದಾರೆ.
ರಸ್ತೆ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಜಯಪುರಕ್ಕೆ ಬಂದಿರುವ ಸಚಿವ ಗೋವಿಂದ ಕಾರಜೋಳ, ಸಂಪುಟ ವಿಸ್ತರಣೆ ಸಂಬಂಧ ಸಿಎಂ, ಮೋದಿ, ಶಾ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಸಚಿವ ಸ್ಥಾನ ತ್ಯಾಗಕ್ಕೂ ಓಕೆ ಅಂತಾ ಹೇಳಿದ್ದಾರೆ.
ಇನ್ನು ಹಾವೇರಿಯಲ್ಲಿ ಮಾತ್ನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟ ವಿಸ್ತರಣೆ ಮಾಡುವುದು ಸಿಎಂ ಅವರ ಪರಮಾಧಿಕಾರ. ಸಿಎಂ ಹಾಗೂ ಪಕ್ಷ ತೆಗೆದುಕೊಳ್ಳುವ ನಿರ್ಣಯಕ್ಕೆ ನಾನು ಬದ್ಧವೆಂದು ಹೇಳಿದ್ದಾರೆ. ಈ ಮೂಲಕ ಒಬ್ಬೊಬ್ಬ ಸಚಿವರು ತಮ್ಮ ಸ್ಥಾನ ತ್ಯಾಗ ಮಾಡಲು ಮುಂದಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.