ಪ್ರಜಾಸ್ತ್ರ ಸುದ್ದಿ
ಕೋಲಾರ: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆಯನ್ನು ಕೋಲಾರ ಜಿಲ್ಲೆಯಿಂದ ಹಮ್ಮಿಕೊಂಡಿದ್ದು, ಜಿಲ್ಲೆಯ ಒಂದೊಂದು ಕ್ಷೇತ್ರಗಳಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಹೀಗೆ ಹೊರಟ ಯಾತ್ರೆಯ ವೇಳೆ ಸಾರ್ವಜನಿಕರು ಹತ್ತು ಹಲವು ಮನವಿ, ದೂರುಗಳನ್ನು ಸಲ್ಲಿಸುತ್ತಿದ್ದಾರೆ.
ಇಲ್ಲೊಂದು ಮನವಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅದೇನು ಅಂದರೆ, ಕೋಲಾರ ಜಿಲ್ಲೆಯಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಹೀಗಾಗಿ 35-45 ವಯಸ್ಸಿನವರೆಗೂ ಅನೇಕ ಹುಡುಗರು ಮದುವೆಯಾಗಿಲ್ಲ. ಹೆಚ್ಚಾಗಿ ಹೊರ ಜಿಲ್ಲೆಗಳಿಗೆ ಹೆಣ್ಮಕ್ಕಳನ್ನು ಮದುವೆ ಮಾಡಿ ಕೊಡುತ್ತಿದ್ದು, ನೀವು ಗೆದ್ದು ಮುಖ್ಯಮಂತ್ರಿಯಾಗುತ್ತೀರಿ ಅನ್ನೋ ನಂಬಿಕೆಯಿದೆ. ನೀವು ಮುಖ್ಯಮಂತ್ರಿ ಆದ ಮೇಲೆ, ಕೋಲಾರ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಹೆಣ್ಮಕ್ಕಳನ್ನು ಮದುವೆ ಮಾಡಿಕೊಡಬಾರದು ಎಂದು ನಿಯಮ ಜಾರಿಗೆ ತನ್ನಿ ಅನ್ನೋ ವಿಚಿತ್ರ ಮನವಿ ಸಲ್ಲಿಸಲಾಗಿದೆ.
ಈ ರೀತಿ ಮಾಡಲು ಆಗುವುದಿಲ್ಲ ಅನ್ನೋದು ಒಂದು ಕಡೆ ಆದರೆ, ಸರ್ಕಾರಿ ನೌಕರಿಯವರೆ ಬೇಕು, ರೈತರ ಮಕ್ಕಳು, ಉದ್ಯೋಗಸ್ಥರು ಬೇಡ ಎಂದು ಹೊರಟರೆ ಗಂಡ್ಮಕ್ಕಳ ಗತಿ ಏನು ಅನ್ನೋದು ಮತ್ತೊಂದು ಕಡೆ. ಹೆಣ್ಣು ಬೇಡ, ಗಂಡು ಮಾತ್ರ ಬೇಕು ಎನ್ನುವವರಿಗೆ ಇದೊಂದು ಪಾಠ ಅಂತಾ ಮತ್ತೆ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.