ಪ್ರಜಾಸ್ತ್ರ ಒಳ್ಳೆಯ ಸುದ್ದಿ
ಬೆಂಗಳೂರು: ಪೊಲೀಸರು ಅಂದರೆ ಬರೀ ಶಿಕ್ಷೆ ನೀಡುವವರು. ಕಾನೂನು ಹೆಸರಿನಲ್ಲಿ ಜನರ ಪ್ರಾಣ ಹಿಂಡುವವರು ಎಂದುಕೊಳ್ಳುತ್ತೇವೆ. ಹಾಗಂತ ಅಂತವರ ಇಲ್ಲ ಅಂತಾನೂ ಅಲ್ಲ. ಅಂತವರ ನಡುವೆ ಮಾನವೀಯ ಗುಣಗಳನ್ನ ಅಳವಡಿಸಿಕೊಂಡ ಸಾಕಷ್ಟು ಜನ ಪೊಲೀಸ್ ಅಧಿಕಾರಿಗಳು ಇದ್ದಾರೆ. ಅಂತವರ ಸಾಲಿನಲ್ಲಿ ವಿಜಯನಗರ ಪಿಎಸ್ಐ ಮನು ಅವರು ಸೇರುತ್ತಾರೆ.
ಕರೋನಾ ಲಾಕ್ ಡೌನ್ ನಿಂದಾಗಿ ಸಾಕಷ್ಟು ಜನರು ಸಂಕಷ್ಟ ಎದುರಿಸ್ತಿದ್ದಾರೆ. ಹಲವರು ಬೀದಿಗೆ ಬಿದ್ದಿದ್ದಾರೆ. ಇಂತವರಿಗೆ ಅನೇಕರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಹೀಗಿರುವಾಗ ಅಂಧ ಕಲಾವಿದ ದಂಪತಿ ವಿಜಯನಗರ ಠಾಣೆ ಎದುರು ಎರಡು ಮಕ್ಕಳ ಜೊತೆ ಅಸಾಹಯಕ ಸ್ಥಿತಿಯಲ್ಲಿ ನಿಂತಿದ್ದರು. ಅವರನ್ನ ಪಿಎಸ್ಐ ಮನು ಅವರು ವಿಚಾರಿಸಿದಾಗ, ಬಸವರಾಜು ಮತ್ತು ಚಿನ್ನಮ್ಮ ಅನ್ನೋ ದಂಪತಿ ಸಂಕಷ್ಟದಲ್ಲಿರುವುದು ಗೊತ್ತಾಗಿದೆ.
ಈ ದಂಪತಿಗೆ ಸಾಗರ (2) ಹಾಗೂ ಸಮರ್ಥ(6 ತಿಂಗಳು) ಮಕ್ಕಳಿದ್ದು, ಸಹಾಯದ ನಿರೀಕ್ಷೆಯಲ್ಲಿದ್ದರು. ಆಗ ಪಿಎಸ್ಐ ಮನು ಅವರು 50 ಕೆಜಿ ಅಕ್ಕಿ, 10 ಕೆಜಿ ಬೆಳೆ, 5 ಕೆಜಿ ಗೋಧಿ ಹಿಟ್ಟು, 10 ಲೀಟರ್ ಎಣ್ಣೆ, 10 ಕೆಜಿ ಸಕ್ಕರೆ, 2 ಕೆಜಿ ಟೀ ಪುಡಿ, 1 ಕೆಜಿ ಹಾಲಿನ ಪೌಡರ್, 1 ಬಿಸ್ಕೆಟ್ ಪ್ಯಾಕ್, 12 ಮೈ ಸೋಪು, 12 ಬಟ್ಟೆ ಸೋಪು, ಮಗುವಿಗೆ ಡೈಪರ್, ಗ್ರೈಪ್ ವಾಟರ್ ಸೇರಿದಂತೆ ಮಕ್ಕಳಿಗೆ ಬೇಕಾದ ಔಷಧಿಗಳನ್ನ ಕೊಡಿಸುವ ಮೂಲಕ ಮಾನವೀಯತೆ ತೋರಿಸಿದ್ದಾರೆ. ಇವರ ಸಹಾಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.