ಪ್ರಜಾಸ್ತ್ರ ಸುದ್ದಿ
ಸಿಂದಗಿ: ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಬೇಕಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಹೇಳಿದರು. ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಪಟ್ಟಣದ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಸಂಸ್ಕೃತಿ ಉಳಿದಿದ್ದರೆ ಅದು ಮಹಿಳೆಯರಿಂದ. ಕಸ ಗುಡಿಸುವುದರಿಂದ ಹಿಡಿದು ಪೈಲೆಟ್ ವರೆಗೂ ಮಹಿಳೆಯರು ಸಾಧಿಸಿದ್ದಾರೆ. ಅದೆ ರೀತಿ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ಪುರುಷ ಹಾಗೂ ಮಹಿಳೆಯರಿಗೆ ಕ್ರೀಡೆ ಅವಶ್ಯಕ. ಈ ಭಾಗದಲ್ಲಿ ಸಾರಂಗಮಠ ಶಿಕ್ಷಣದ ಜೊತೆಗೆ ಹಲವು ಮಹತ್ವದ ಕಾರ್ಯಕ್ರಗಳನ್ನು ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಸಾರಂಗಮಠ ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಈ ದಿನವನ್ನು ಸುವರ್ಣ ಅಕ್ಷರದಲ್ಲಿ ಬರೆದಿಡಬೇಕಾದ ದಿನ. ರಂಭಾಪುರಿ ಶ್ರೀಗಳು ಆಗಮಿಸಿ ಕ್ರೀಡಾಪುಟುಗಳಿಗೆ ಆಶೀರ್ವದಿಸಿದ್ದು ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಬರೆದಿಡುವಂತದ್ದು. ಸರ್ಕಾರ ಕ್ರೀಡಾಪಟುಗಳಿಗೆ ನೌಕರಿ ಸಹ ನೀಡುತ್ತಿದೆ. ಉನ್ನತ ಮಟ್ಟದಲ್ಲಿ ಆಡಿ ಸಾಧನೆ ಮಾಡಿ ಎಂದು ಹಾರೈಸಿದರು.
ಕಾಲೇಜಿನ ದೈಹಿಕ ನಿರ್ದೇಶಕ ರವಿ ಗೋಲಾ ಸ್ವಾಗತಿಸಿದರು. ನಂದಿಕೋಲ ನಿರೂಪಿಸಿದರು. ಈ ವೇಳೆ ಕೊನ್ನೂರು ಮಠ, ಕೆಂಭಾವಿ ಮಠದ ಶ್ರೀಗಳು, ಕಾಲೇಜು ಆಡಳಿತಾಧಿಕಾರಿ ಬಿ.ಜಿ ಮಠ, ಕಾರ್ಯದರ್ಶಿ ನೆಹರು ಪೋರವಾಲ, ಪ್ರಾಚಾರ್ಯ ಎಸ್.ಎಂ ಪೂಜಾರಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎಸ್ ಹೈಯಾಳ್ಕರ, ಅಶೋಕ ವಾರದ, ಮಹಾಂತೇಶ ನೂಲನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.