ಪ್ರಜಾಸ್ತ್ರ ಸುದ್ದಿ
ಕೋಲಾರ: ನಿಜಕ್ಕೂ ಇದೊಂದು ದುರಂತವೇ ಸರಿ. ಎರಡು ಕುಟುಂಬದ ನಡುವೆ ಮದುವೆ ಸಂಭ್ರಮ ಸಡಗರ ಮನೆ ಮಾಡಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಫೆಬ್ರವರಿ 7ರಂದು ಮದುವೆಯಾಗಬೇಕಿತ್ತು. ಆದರೆ, ಆರತಕ್ಷತೆಯ ದಿನ ವಧು ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ನಿಮ್ಯಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಗೆ ಕರೆದುಕೊಂಡು ಹೋದ ಮಗಳ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಹೇಳಿದ್ದಾರೆ. ಇಂತಹ ದುಃಖದ ನಡುವೆಯೇ ಕುಟುಂಬಸ್ಥರು ಮಗಳ ಅಂಗಾಂಗ ದಾನ ಮಾಡಿದ್ದಾರೆ. ಅಂದ್ಹಾಗೆ ಮೃತಪಟ್ಟಿರುವ ವಧುವಿನ ಹೆಸರು ಚೈತ್ರಾ. 26 ವರ್ಷದ ಯುವತಿಯನ್ನು ಹೊಸಕೋಟೆ ಮೂಲದ ಯುವಕನೊಂದಿಗೆ ಮದುವೆ ನಿಶ್ಚಿಯಿಸಲಾಗಿತ್ತು. ಶ್ರೀನಿವಾಸಪುರ ಪಟ್ಟಣದ ಮಾರುತಿ ಸಭಾಭವನದಲ್ಲಿ ಮದುವೆ ನಡೆಯಬೇಕಿತ್ತು.
ಅದ್ಯಾವ ಕಾರಣಕ್ಕೆ ಚೈತ್ರಾ ಕುಸಿದು ಬಿದ್ದಳೋ. ಏಕಾಏಕಿ ಮದುಳು ಹೇಗೆ ನಿಷ್ಕ್ರಿಯಗೊಂಡಿತೋ ಗೊತ್ತಿಲ್ಲ. ಸಾವು ಹೇಗೆ ಬರುತ್ತೆ ಅನ್ನೋದಕ್ಕೆ ಇಂತಹ ಘಟನೆಗಳು ಪದೆಪದೆ ಸಾಕ್ಷಿಯಾಗುತ್ತಿವೆ. ಮದುವೆ ಮನೆ ಇದೀಗ ನೀರವ ಮೌನದಿಂದ ಕೂಡಿದೆ.