ಪ್ರಜಾಸ್ತ್ರ ಡೆಸ್ಕ್
ಬೆಂಗಳೂರು: ಕರ್ನಾಟಕದಲ್ಲಿ ಇದೀಗ ಎಲ್ಲೆಡೆ 2023ರ ವಿಧಾನಸಭಾ ಚುನಾವಣೆಯ ಪರ್ವ ಶುರುವಾಗಿದೆ. ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿವೆ. ಈ ವೇಳೆ ರಾಜಕೀಯ ನಾಯಕರು ಅವರು ಭ್ರಷ್ಟರು, ಇವರು ಭ್ರಷ್ಟರು ಎಂದು ಬೊಟ್ಟು ಮಾಡುತ್ತಿದ್ದಾರೆ. ಇದೇನು ಹೊಸ ವಿಷಯವಲ್ಲ. ಹೊಸ ಬಾಟಲ್ ನಲ್ಲಿ ಹಳೆ ಮದ್ಯ ತುಂಬಿಸಿದಂತೆ ಇರುತ್ತೆ ಇವರ ಮಾತುಗಳು.
ರಾಜಕೀಯಕ್ಕೆ ಬರುವುದೆ ಹಣ, ಆಸ್ತಿ ಮಾಡುವುದಕ್ಕೆ ಅನ್ನೋ ಮಟ್ಟಕ್ಕೆ ಪಾಲಿಟಿಕ್ಸ್ ಬಂದು ನಿಂತಿದೆ. ಗ್ರಾಮ ಪಂಚಾಯ್ತಿ ಚುನಾವಣೆಯಿಂದ ಹಿಡಿದು ಪಾರ್ಲಿಮೆಂಟ್ ಚುನಾವಣೆವರೆಗೂ ಅಕ್ರಮ. ಹಾಗಾದರೆ ಇಲ್ಲಿ ಯಾರು ಭ್ರಷ್ಟರು ಸ್ವಾಮಿ?
ಗ್ರಾಮ ಪಂಚಾಯ್ತಿಯಿಂದ, ಕ್ಲರ್ಕ್ ಜೀವನದಿಂದ, ಪುಡಾರಿತನದಿಂದ ಜೀವನ ಶುರು ಮಾಡಿದವರು ರಾಜಕೀಯ ಬಂದು ಶಾಸಕ, ಸಚಿವರು, ಮುಖ್ಯಮಂತ್ರಿಗಳು ಆದವರು ಒಂದೊಮ್ಮೆ ಅವರ ಆತ್ಮಸಾಕ್ಷಿಯನ್ನು ಕೇಳಿಕೊಂಡರೆ ಸಾಕು ತಾವೆಷ್ಟು ಶುದ್ಧರಿದ್ದೇವೆ ಅನ್ನೋದು ತಿಳಿಯುತ್ತೆ. ಇನ್ನು ರಾಜಕೀಯ ನಾಯಕರ, ಅಧಿಕಾರಿಗಳ ಭ್ರಷ್ಟತೆಯನ್ನು ಪ್ರಶ್ನಿಸುವ ಜನಸಾಮಾನ್ಯರು ಸಹ ಅದರ ಹೊರತಾಗಿಲ್ಲ. ಈ ಕಾರಣಕ್ಕಾಗಿಯೇ ಇಂದು ರಾಜಾರೋಷವಾಗಿ ಅಕ್ರಮವನ್ನು ಮಾಡುತ್ತಿದ್ದಾರೆ. ಇಲ್ಲಿ ಬೆಕ್ಕಿಗೆ ಗಂಟೆ ಕಟ್ಟುವರು ಯಾರು?
ರಾಜಕಾರಣಿಗಳು ಹಾಗೂ ಅವರ ಮಕ್ಕಳ ಆಸ್ತಿ, ಅವರ ಜೀವನ ಶೈಲಿ ಹೇಳುತ್ತೆ ಎಷ್ಟೊಂದು ಸಂಪಾದಿಸಿದ್ದಾರೆ. ಹೇಗೆ ಸಂಪಾದಿಸಿದ್ದಾರೆ ಎಂದರು. ಇವರನ್ನು ತಮ್ಮ ಅಧಿಕಾರದಿಂದ ಕಟ್ಟಿ ಹಾಕಬೇಕಿದ್ದ ಅಧಿಕಾರಿಗಳು ಅವರೆದರು ಕೈ ಕಟ್ಟಿಕೊಂಡು ನಿಂತು ಎಷ್ಟೊಂದು ಎಂಜಲು ಕಾಸು ಮಾಡಿಕೊಂಡಿದ್ದಾರೆ ಎಂದು ಅರ್ಥವಾಗುತ್ತೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಯಂತ್ರದ ಅಡಿಯಲ್ಲಿ ಬರುವ ಪ್ರತಿಯೊಬ್ಬರನ್ನು ಪ್ರಶ್ನಿಸುವ ಹಕ್ಕು ಹೊಂದಿರುವ ಪ್ರಜೆಗೂ ಪಾಪಪ್ರಜ್ಞೆ ಕಾಡುವುದಿಲ್ಲ. ಹಾಗಾದರೆ ಇಲ್ಲಿ ಯಾರು ಭ್ರಷ್ಟರು ಸ್ವಾಮಿ?